ಪ್ರೀತಿಸುವವರು ಪುಣ್ಯವಂತರು: ಅಕ್ಷಯ ಕಾಂತಬೈಲು

        
ಫಟಫಟನೆ ಚಿಟಿಕೆ ಹೊಡೆದಷ್ಟು ವೇಗದಲ್ಲಿ ನಮ್ಮ ಜೀವನದಲ್ಲೊಂದು ಒಳ್ಳೆಯ ಬದಲಾವಣೆಯು ಕಂಡುಬಿಟ್ಟರೆ, ಅದು ಅವನ ಅಥವಾ ಅವಳ ಪುಣ್ಯ ಮಾರಾಯ ಅಂತ ಹೇಳಿಸಿಕೊಳ್ಳುತ್ತೇವೆ. ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮಗೆ ಮಾತ್ರವೆ ಗೊತ್ತು. ಬದಲಾವಣೆಗೊಂದು ಪ್ರೀತಿಯು ಕಾರಣವಾದರೆ ಅದರ ಸೊಗಸೇ ಬೇರೆ ಅನ್ನಿಸುವುದುಂಟು. ಗಟ್ಟಿಯಾಗಿ ನಮ್ಮ ಮನಸ್ಸು ಒಳಗೊಳಗೇ ಜಪಿಸುತ್ತಿರುತ್ತದೆ. ಅವಳಿಂದಾಗಿ ಮತ್ತೆ ನನಗೆ ಜೀವಿಸಬೇಕೆಂದೆನಿಸಿತು, ಅವನಿಂದಾಗಿ ನಾನು ಮತ್ತೆ ಉತ್ಸುಕಳಾದೆ, ಅವಳೆಂದರೆ ಪ್ರಾಣ, ಅವನೆಂದರೆ ಉಸಿರು ಹೀಗೆ. ನಿಜವಾಗಿ ಮತ್ತು ಸಹಜವಾಗಿ ಪ್ರೀತಿಗೆ ಬಿದ್ದರೆ, ನಾವು ಪ್ರೀತಿಸುವವರು ಸಾಕ್ಷಾತ್ ದೇವರಾಗಿ ಕಾಣುವ ಹೊತ್ತಿದು. ಒಂದು ನವಿರಾದ, ಅತ್ಯಂತ ಪರಿಶುದ್ಧವಾದ, ಬೆಚ್ಚಗಿರುವ, ಮೋಹಕವಾದ ಮತ್ತು ನಾವು ಬಯಸಿದಂಥ ಪ್ರೀತಿಯು ದೊರೆತರೆ ಅದು ನಮ್ಮ ಪುಣ್ಯವಲ್ಲದೆ ಮತ್ತೇನು! 

ಮೊನ್ನೆ ಒಬ್ಬ ಪರಮ ಪ್ರೇಮಿಯ ಜೊತೆ ಕೇಳಿದೆ, ನೀವು ಬಾರಿ ಬಾರಿ ನೋಡಿದ ಚಲನಚಿತ್ರ ಯಾವುದು? ಅಂತ. ಆ ಪ್ರೇಮಿ ನಾಚಿಕೊಂಡು ಉತ್ತರಿಸಿದ, ಮುಂಗಾರುಮಳೆ ಅಂತ! ನಾನು ಯೋಚಿಸತೊಡಗಿದ್ದೇನೆ. ಈ ಚಲನಚಿತ್ರಗಳೆಲ್ಲಾ ಬರೀ ಪ್ರೀತಿಗೆಂದೇ ಮೀಸಲಾಗಿದ್ದರೆ ಎಷ್ಟು ಚೆಂದವಲ್ವಾ ಎಂದು. ಆದರೆ ಬರುತ್ತಿರುವ ರೌಡಿಸಂ, ಮಸಾ¯ ಕಥೆಗಳ ಚಿತ್ರಗಳಿಂದ ಕಾಣಬಹುದಾದ ನವಿರು ಪ್ರೀತಿಯ ಅರ್ಥವೇ ಒಗಟಾಗಿಬಿಟ್ಟಿದೆ. ಹಾಗಾಗಿ ಸಮಾಜದ ಪ್ರಬಲ ಮಾಧ್ಯಮವಾದ ಇಂಥ ಸಿನಿಮಾಗಳ ಪ್ರಭಾವವೋ ಏನೋ ಗೊತ್ತಿಲ್ಲ. ಇಂದಿನ ಯುವಜನರ ಪ್ರೀತಿಯು ಮೊದಲು ಶುರುವಾಗುವುದೇ ಪ್ರಣಯದಿಂದ! ಈ ಪ್ರಣಯೋನ್ಮತ್ತ ಪ್ರೀತಿಗೂ ಕೂಡ ಜಾಗತಿಕರಣದ ಹೊಣೆ ಹೊರಿಸಿದರೆ ತಪ್ಪಾಗಲಾರದು. ಓಡುವ ಇಂದಿನ ಯುಗದಲ್ಲಿ ಪ್ರೀತಿಯೂ ಬಹುಶಃ ಫಾಸ್ಟ್ ಫಾಸ್ಟ್ ಇರಬಹುದು. ಒಂದು ಚಿಂತನೆ ಮಾಡಬೇಕೆಂದನಿಸುತ್ತದೆ. ಹೇಗೆ ಸೂತ್ರಗಳು ಗಣಿತದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆಯೋ, ಹಾಗೇ ಪ್ರೀತಿಗೂ ಒಂದು ಸರಳ ಸೂತ್ರದÀ ಅವಶ್ಯಕತೆ ಇದೆಯೇನೋ. ಇದರಿಂದಾಗಿ ಮೂರು- ಆರು ತಿಂಗಳಿಗೆ ಭಗ್ನಗೊಳ್ಳುವ ಪ್ರೇಮಿಗಳ ಪ್ರೀತಿಯು ಶಾಶ್ವತವಾಗಿ ಉಳಿದೀತು.  

ಪ್ರೀತಿಸುವ ಇಬ್ಬರಲ್ಲೂ ಯೋಚನೆಗಳಲ್ಲಿ, ಆಸಕ್ತಿಗಳಲ್ಲಿ, ಹವ್ಯಾಸಗಳಲ್ಲಿ ಸಮಾನ ಮನಸ್ಥಿತಿಯಿಲ್ಲದಿರೆ ಅದು ಕೇವಲ ದೈಹಿಕ ತೃಷೆಯನ್ನಷ್ಟೇ ನೀಗಿಸಬಲ್ಲುದು. ಇದನ್ನು ಪ್ರೀತಿ ಅಂತ ಹೇಗೆ ಒಪ್ಪಿಕೊಳ್ಳುವುದು? ಇದೊಂದು ಮಾಮೂಲಿ ಕ್ರಿಯೆಯಾಗಿಬಿಡುತ್ತದೆ! ನಿನಗಾಗಿ ನಾನು ನನಗಾಗಿ ನೀನು, ಅನ್ನುವ ಮಾತಿಗೆ ಶರಣಾಗಿ, ಮನದಾಳದ ಭಾವಗಡಲಲ್ಲಿ ಒಮ್ಮತವು ಪ್ರೇಮಿಗಳಲ್ಲಿ ಮೂಡಿದರೆ ಅದರ ಚೆಂದವೇ ಬೇರೆ. ಪ್ರೀತಿಸುವ ಅವಳ ಮಡಿಲಲ್ಲಿ ಒಮ್ಮೆ ತಲೆ ಒರಗಿಸಿಬಿಡಬೇಕೆಂದನ್ನಿಸುತ್ತದೆ. ಹಾಗೆಯೇ ಅವನ ಎದೆಯ ಬಾಚಿ ತಬ್ಬಿಕೊಳ್ಳಬೇಕೆಂದನಿಸುತ್ತದೆ. ನಿಷ್ಕಲ್ಮಷ ಪ್ರೀತಿಯಿಂದ ಅವರ ಜೀವನದಕ್ಕೊಂದು ಹೊಸ ಗತಿ ಸಿಗುತ್ತದೆ. ವಿದ್ಯಾರ್ಥಿ ಜೀವನದಲ್ಲೂ ನಮಗೊಬ್ಬರು ಇಂತಹ ಸಂಗಾತಿ ಸಿಕ್ಕರೆ ಮುದ್ದು ಮಾಡಿ ಅವರನ್ನು ನಮ್ಮ ಬಾಳಿನ ಕೊನೆಯ ತನಕವೂ ಜೀವಂತವಾಗಿಟ್ಟುಕೊಳ್ಳಬೇಕೆಂದು ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ನಮ್ಮ ಮಗ ಅಥವಾ ಮಗಳು ಪ್ರೀತಿಗೆ ಬಿದ್ದಿದ್ದಾರೆಂಬ ಮಾತ್ರಕ್ಕೆ ಹೆತ್ತವರು ಅವರನ್ನು ದೂಷಿಸುವುದು ಮತ್ತು ಪರಿಪರಿಯಾಗಿ ಹಿಂಸಿಸುವುದು ದೊಡ್ಡ ಪಾಪ. ಪ್ರೀತಿಯು ಒಂದು ರೀತಿಯಲ್ಲಿ ಮಳೆಯ ಹಾಗೆ. ಅದು ಮೋಡಗಟ್ಟಿ ಜಲ ಸುರಿಸಿ, ಜೀವನದ ಫಲವತ್ತತೆ ಹೆಚ್ಚಿಸಬಲ್ಲದು. ಅದು ನಮ್ಮ ಜಂಜಾಟದ ಬದುಕಿಗೆ ಆರಾಮ ಒದಗಿಸಬಲ್ಲದು. ಜೀವನದ ಬಳಲಿಕೆಯನ್ನು ಹೋಗಲಾಡಿಸಬಲ್ಲದು. ಹೀಗಾಗಿ ಪ್ರತಿಯೊಬ್ಬ ಪ್ರೇಮಿಯ ಬದುಕಿಗೆ ಪ್ರೀತಿಯು ಅಮೃತಧಾರೆಯೇ ಸರಿ. 

ಪ್ರೀತಿಯು ಕೆಲವೊಮ್ಮೆ ಭಾರಿ ವಿಸ್ಮಯ ಹುಟ್ಟಿಸಬಲ್ಲುದು. ವಯಸ್ಸಿನ ಅಂತರವನ್ನೇ ಬುಡಮೇಲು ಮಾಡಿ ಕುಕ್ಕಿಸಬಲ್ಲುದು. ನಾಟಕಗಾರ ವಿಲಿಯಂ ಶೇಕ್ಸ್‍ಪಿಯರ್ ಅವರು ಪ್ರೀತಿಸಿ ಮದುವೆಯಾದದ್ದು ಅವರಿಗಿಂತ ಎಂಟು ವರ್ಷ ಹಿರಿಯರಾಗಿದ್ದವಳನ್ನು! ಸಚಿನ್ ತೆಂಡೂಲ್ಕರ್ ಕೂಡ ಪ್ರೀತಿಸಿದ್ದು ತನಗಿಂತ ಹಿರಿಯಳಾದ ಅಂಜಲಿಯನ್ನು. ದೂರದವರು ಯಾಕೆ ನಮ್ಮವರೇ ಆದ ಚಿತ್ರನಟಿ ಜಯಮಾಲ ಪ್ರೇಮಿಸಿ ಮದುವೆಯಾಗಿದ್ದು ಅವರಿಗಿಂತ ಹತ್ತು ಇಪ್ಪತ್ತು ವಯಸ್ಸಿಗೆ ಸಣ್ಣವರನ್ನು! ಹಾಗಿದ್ದರೆ ಪ್ರೀತಿಗೆ ವಯಸ್ಸಿನ ಕಟ್ಟುಪಾಡುಗಳೇನು ಬೇಡಬಿಡಿ. ಜಾತಿ- ಧರ್ಮದ ಪರಿಧಿಗೂ ನಿಲುಕದ ವಿಚಾರ ಈ ಪ್ರೀತಿ. ನನಗನ್ನಿಸುತ್ತದೆ, ಪ್ರೀತಿಯು ಜಾಗತಿಕವಾದಂಥ ದೈವಿಕ ಸ್ಥಿತಿ ಮತ್ತು ಅಲೌಕಿಕವಾದ ವಿಚಾರ. ಪ್ರೀತಿಯೂ ಆಧ್ಯಾತ್ಮ ಸುಧೆಯನ್ನು ಸ್ರವಿಸಬಲ್ಲುದು.

ಎರಡು ಜೀವಗಳಿಗೆ ಪ್ರೀತಿ ಹುಟ್ಟಿದ ಹೊಸದರಲ್ಲಿ; ಎಂದೋ ಕೇಳಿಬಿಟ್ಟ ಪ್ರಣಯಗೀತೆಗಳು ಮತ್ತೆಮತ್ತೆ ಕೇಳಬೇಕೆಂದು ತೋಚುತ್ತದೆ. ಮನಪಟಲದಿಂದ ದೂರವಾಗಿದ್ದ ಪಾರ್ಕಿಗೊಂದು ನವೀನರೂಪ ಬರುತ್ತದೆ. ಕತ್ತಲೆ ತುಂಬಿದ ಫಿಲಂ ಥಿಯೇಟರ್ ಜಗಮಗಿಸುವ ಬೆಳಕಾಗಿ ಹತ್ತಿರವಾಗಿ ಬಿಡುವುದು. ರಸ್ತೆಬದಿಯ ಪಾನಿಪುರಿ ಗಾಡಿಯ ರುಚಿ ತೀರಿಸಬೇಕೆಂದು ನಾಲಿಗೆ ಹಂಬಲಿಸುತ್ತದೆ. ಜನಸಂಧಿ ಇರದ ದೂರದ ಅವಕಾಶವ ಪ್ರೇಮಭರಿತ ಕಣ್ಣುಗಳು ಅರಸಿಕೊಂಡು ಹೋಗುತ್ತಿರುತ್ತೆ. ಇಲ್ಲಿ ಕಣ್ಣಿಗೆ ಹಲವು ದೇವಸ್ಥಾನಗಳು, ಗಿರಿ ಶೃಂಗಗಳು, ನದಿ ಬದಿ, ಕಡಲ ತಡಿ ಹೀಗೆ ಎಲ್ಲವೂ ಬೀಳತೊಡಗುತ್ತವೆ. ಕೆಲವರಿಗೆ ಇವೆಲ್ಲಾ ನೋಡುತ್ತಾ ನೋಡುತ್ತಾ ಅನಿಸುತ್ತೆ, ನಾವು ಈಗಲೇ ಮದುವೆಯಾಗಬೇಕು. ಇನ್ನೂ ಕೆಲವರಿಗೆ ಅನ್ನಿಸುತ್ತೆ, ನಾವು ಕೊನೆವರೆಗೂ ಪ್ರೇಮಿಗಳಾಗಿರಬೇಕು. ಒಟ್ಟಿನಲ್ಲಿ ಪ್ರೀತಿಯು ಕೊನೆಯತನಕ ಜಿನುಗುತ್ತಿರಬೇಕೆಂಬುದು ಸರ್ವಸತ್ಯ!    

ರೋಮಿಯೊ ಜೂಲಿಯೆಟ್ ಥರ ನಾವುಗಳು ಪ್ರೀತಿಸಬೇಕು, ಕೃಷ್ಣ ರಾಧೆಯರಂತೆ ಸಂಬಂಧ ನಮ್ಮ ಪ್ರೀತಿಯಲ್ಲಿರಬೇಕು. ಹೀಗೆ ದೊಡ್ಡವರ ಪ್ರೀತಿಯ ಅನುಕರಣೆಗೆ ಹೋಗದೆ, ನಮ್ಮ ಪ್ರೀತಿಯ ರೀತಿಯನ್ನು ನಾವೇ ಅತ್ಯಂತ ನವಿರಾಗಿ ಮತ್ತು ಪ್ರಾಮಾಣಿಕವಾಗಿ ಕಟ್ಟೋಣ. ಪುಣ್ಯವಂತರಾಗುವ.
                                                    
-ಅಕ್ಷಯ ಕಾಂತಬೈಲು

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ದ್ಯಾವನೂರು ಮಂಜುನಾಥ್

ಹೌದು ಪ್ರೀತಿಸುವ ಇಬ್ಬರಲ್ಲೂ ಯೋಚನೆಗಳಲ್ಲಿ, ಆಸಕ್ತಿಗಳಲ್ಲಿ, ಹವ್ಯಾಸಗಳಲ್ಲಿ ಸಮಾನ ಮನಸ್ಥಿತಿಯಿಲ್ಲದಿರೆ ಅದು ಕೇವಲ ದೈಹಿಕ ತೃಷೆಯನ್ನಷ್ಟೇ ನೀಗಿಸಬಲ್ಲುದು. ಇದನ್ನು ಪ್ರೀತಿ ಅಂತ ಹೇಗೆ ಒಪ್ಪಿಕೊಳ್ಳುವುದು? ಇದೊಂದು ಮಾಮೂಲಿ ಕ್ರಿಯೆಯಾಗಿಬಿಡುತ್ತದೆ!  

http://www.dyavanoorkalam.blogspot.in/2013/07/blog-post_31.html ಸಮಾಯ ಮಾಡಿ ಈ ಲೇಖನವನ್ನು ಓದಿ ಅಕ್ಷಯ ಕಾಂತಬೈಲು

ದ್ಯಾವನೂರು ಮಂಜುನಾಥ್

ಹೌದು ಪ್ರೀತಿಸುವ ಇಬ್ಬರಲ್ಲೂ ಯೋಚನೆಗಳಲ್ಲಿ, ಆಸಕ್ತಿಗಳಲ್ಲಿ, ಹವ್ಯಾಸಗಳಲ್ಲಿ ಸಮಾನ ಮನಸ್ಥಿತಿಯಿಲ್ಲದಿರೆ ಅದು ಕೇವಲ ದೈಹಿಕ ತೃಷೆಯನ್ನಷ್ಟೇ ನೀಗಿಸಬಲ್ಲುದು. ಇದನ್ನು ಪ್ರೀತಿ ಅಂತ ಹೇಗೆ ಒಪ್ಪಿಕೊಳ್ಳುವುದು? ಇದೊಂದು ಮಾಮೂಲಿ ಕ್ರಿಯೆಯಾಗಿಬಿಡುತ್ತದೆ!  

http://www.dyavanoorkalam.blogspot.in/2013/07/blog-post_31.html 

 

ಸಮಾಯ ಮಾಡಿ ಈ ಲೇಖನವನ್ನು ಓದಿ ಅಕ್ಷಯ ಕಾಂತಬೈಲು

ಅ. ಕಾ
ಅ. ಕಾ
8 years ago
3
0
Would love your thoughts, please comment.x
()
x