ಪಂಜು ಕುರಿತು

ಅಂತರ್ಜಾಲ ಲೋಕದಲ್ಲಿ ಕನ್ನಡದ ಪರಿಮಳ ದಿನ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದ್ದ ಕಾಲದಲ್ಲಿ ಕನ್ನಡದ ಕಂಪನ್ನು ಮತ್ತಷ್ಟು ಹರಡುವ ನಿಟ್ಟಿನಲ್ಲಿ ಪಂಜು ಅಂತರ್ಜಾಲ ತಾಣ (www.panjumagazine.com) ವನ್ನು ದಿನಾಂಕ 21.01.2013 ರಂದು ಲೋಕಾರ್ಪಣೆ ಮಾಡಲಾಯಿತು.

ಒಟ್ಟು ಲೇಖನಗಳು:
ಮೊದಲ ಸಂಚಿಕೆಯಲ್ಲಿ ಕೇವಲ ಏಳು ಲೇಖನಗಳನ್ನು ಪ್ರಕಟಿಸಿದ ಪಂಜು ಈ ಹತ್ತು ವರ್ಷಗಳಲ್ಲಿ ಪ್ರಕಟಿಸಿರುವ ಒಟ್ಟು ಪೋಸ್ಟ್ ಗಳ ಸಂಖ್ಯೆ 3903.

ಪಂಜು ವೈವಿಧ್ಯ:
ಪಂಜುನಲ್ಲಿ ಕತೆ, ಕವನ, ಕಾದಂಬರಿ, ವೈವಿಧ್ಯಮಯ ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಪ್ರಬಂಧ, ಪ್ರೇಮಪತ್ರ, ಸಾಮಾನ್ಯಜ್ಞಾನ, ಸಂದರ್ಶನ, ಮಕ್ಕಳ ಸಾಹಿತ್ಯ, ಅನುವಾದಿತ ಕತೆ, ಅನುವಾದಿನ ಕವನ, ಚುಟುಕ, ಪ್ರವಾಸ ಕಥನ, ಅಂಕಣ ಬರಹಗಳು, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನಷ್ಟೇ ಅಲ್ಲದೆ ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ಪ್ರಕಟಿಸಿದ್ದೇವೆ.

ಲೇಖಕರು ಮತ್ತು ಅಂಕಣಕಾರರು:
ಪಂಜುವಿಗಾಗಿ 11 ಸೆಪ್ಟೆಂಬರ್‌, 2022 ರವರೆಗೆ 1080 ಲೇಖಕರು ಲೇಖನಗಳನ್ನು ಬರೆದಿರುತ್ತಾರೆ. ಇಲ್ಲಿಯವರೆಗೆ ಪಂಜುವಿಗಾಗಿ 25 ಅಂಕಣಕಾರರು ವಿಧವಿಧದ ವಿಷಯಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಕತೆಗಳು/ ಕವಿತೆಗಳು:
ಸೆಪ್ಟೆಂಬರ್‌ 2022 ರವರೆಗೆ ಪಂಜುವಿನಲ್ಲಿ ನಾನೂರಕ್ಕೂ ಹೆಚ್ಚು ವೈವಿಧ್ಯಮಯ ಕತೆಗಳು ಪ್ರಕಟಗೊಂಡಿವೆ ಹಾಗು ಪಂಜು ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ಪ್ರಕಟಿಸಿದೆ.

ವಿಶೇಷ ಸಂಚಿಕೆಗಳು:
ಪಂಜು ತಾನು ಪ್ರಾರಂಭವಾದ ಕೆಲವೇ ದಿನಗಳಲ್ಲಿ 2013 ರಲ್ಲಿ ಪ್ರೇಮಿಗಳ ದಿನದ ವಿಶೇಷ ಸಂಚಿಕೆ ಹೊರತಂದಿತ್ತು. ತದ ನಂತರ 25ನೇ ವಾರದ ಖುಷಿಗೆ ಐವತ್ತನೇ ವಾರದ ಸಂಭ್ರಮಕ್ಕೆ ಅಂತ ವಿಶೇಷ ಸಂಚಿಕೆಗಳನ್ನೂ ಸಹ ಹೊರತಂದಿತ್ತು. ಪಂಜು 2014 ರಲ್ಲಿ ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆ, ವಿಶ್ವ ಮಹಿಳಾ ದಿನದ ವಿಶೇಷ ಸಂಚಿಕೆ, ಮಕ್ಕಳ ಹಕ್ಕುಗಳ ಕುರಿತ ವಿಶೇಷ ಸಂಚಿಕೆ, ಹಾಗು ನೂರು ವಾರಗಳ ಕುರುಹುವಿಗಾಗಿ ವಿಶಿಷ್ಟ ಚೇತನರ ಕುರಿತ ವಿಶೇಷ ಸಂಚಿಕೆ ಪ್ರಕಟಿಸಿದೆ, 2015 ರಲ್ಲಿ ಹೋಳಿ ವಿಶೇಷಾಂಕ, 2016 ರಲ್ಲಿ ಪಂಜುವಿನಲ್ಲಿ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ವಿಶೇಷಾಂಕ, ಹಾಗು ಸಾಹಿತಿ ಗೋಪಾಲ ವಾಜಪೇಯಿಯವರ ಗೌರವಾರ್ಥವಾಗಿ ಅವರ ನೆನಪಿನ ಸಂಚಿಕೆಗಳನ್ನು ಕೂಡ ಹೊರತಂದಿದೆ.

ಅಂತರ್ಜಾಲ ಪತ್ರಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿಥಿ ಸಂಪಾದಕರನ್ನು ಕರೆಸಿ ಮೂರು ವಿಶೇಷ ಸಂಚಿಕೆಗಳನ್ನು ಹೊರತರಲಾಗಿದೆ. ಲೇಖಕಿಯಾದ ಶ್ರೀಮತಿ ಅಂಜಲಿ ರಾಮಣ್ಣ “ಮಕ್ಕಳ ಹಕ್ಕುಗಳ ಕುರಿತ ವಿಶೇಷ ಸಂಚಿಕೆ”, ವ್ಯಂಗ್ಯ ಚಿತ್ರಕಾರರಾದ ಅರುಣ್ ನಂದಗಿರಿ “ವಿಶಿಷ್ಟ ಚೇತನರ ಕುರಿತ ವಿಶೇಷ ಸಂಚಿಕೆ”, ಲೇಖಕರಾದ ಶ್ರೀ ಗುರುಪ್ರಸಾದ ಕುರ್ತಕೋಟಿಯವರು “ದಿ. ಗೋಪಾಲ ವಾಜಪೇಯಿಯವರ ಗೌರವಾರ್ಥವಾಗಿ ಅವರ ನೆನಪಿನ ಸಂಚಿಕೆ”ಯ ಅತಿಥಿ ಸಂಪಾದಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಪಂಜು ಆಡಿಯೋ:
ಪಂಜುವಿನಲ್ಲಿ ಪ್ರಾಯೋಗಿಕವಾಗಿ ಕವನವಾಚನದ ಆಡಿಯೋ ಮತ್ತು ಕಥಾವಾಚನದ ಆಡಿಯೋ ಪ್ರಾರಂಭಿಸಲಾಗಿತ್ತು. ಜೊತೆಗೆ ಜಾಣ ಸುದ್ದಿ ಎಂಬ ವಿಜ್ಞಾನ ವಿಷಯದ ಕುರಿತ ಆಡಿಯೋವನ್ನು ಬರಹದ ಸಹಿತ ಪ್ರಕಟಿಸುತ್ತಾ ಬಂದಿದ್ದೇವೆ.

ಪಂಜು ಚುಟುಕ ಸ್ಪರ್ಧೆ:
2013 ರಲ್ಲಿ ಪಂಜು ವತಿಯಿಂದ ಚುಟುಕ ಸ್ಪರ್ದೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಮೂವತ್ತಕ್ಕೂ ಹೆಚ್ಚು ಲೇಖಕರ ಸಾವಿರಕ್ಕೂ ಹೆಚ್ಚು ಚುಟುಕುಗಳು ಬಂದಿದ್ದವು. ಬೆಂಗಳೂರಿನಲ್ಲಿ ದಿನಾಂಕ 31ನೇ ಮಾರ್ಚ್ 2013 ರಂದು ಕಾರ್ಯಕ್ರಮ ಮಾಡಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಂಜು ಕಥಾ ಸಂಕಲನ ಸ್ಪರ್ಧೆ:

2022 ರಲ್ಲಿ ಪಂಜು ಕಥಾ ಸಂಕಲನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕನ್ನಡದ ಇಪ್ಪತ್ತು ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಶಸ್ತಿ  ವಿಜೇತ ಕೃತಿ “ಬಯಲಲಿ ತೇಲುತ ತಾನು” ಲೇಖಕರಾದ ಅಕ್ಷಯ್‌ ಪಂಡಿತ್‌ ರವರಿಗೆ ಬಹುಮಾನದ ಹಣ ೧೦,೦೦೦ ರೂಪಾಯಿಗಳನ್ನು ನೀಡಲಾಯಿತು.

ಪಂಜುವಿನ ನಿಯಮ:
ಲೇಖನ ಈಗಾಗಲೇ ಬೇರೆ ಪತ್ರಿಕೆ, ಫೇಸ್ ಬುಕ್, ಬ್ಲಾಗ್ ಗಳಲ್ಲಿ ಪ್ರಕಟವಾಗಿದ್ದರೆ ಅಂತಹ ಬರಹಗಳನ್ನು ಪಂಜು ಪ್ರಕಟಣೆಗೆ ಪರಿಗಣಿಸುವುದಿಲ್ಲ. ಗೂಗಲ್ ಸರ್ಚ್ ಸಹಾಯದಿಂದ ಕದ್ದ ಕವಿತೆ/ ಲೇಖನಗಳ ಕಳ್ಳರನ್ನು ಕಂಡುಹಿಡಿದು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ ಮತ್ತು ಅಂತಹ ಲೇಖಕರ ಲೇಖನಗಳನ್ನು ಪ್ರಕಟಿಸುವುದಿಲ್ಲ.

ಪಂಜು ಅಂಕಿ ಅಂಶ:
ಪಂಜು ಪ್ರಾರಂಭವಾದ ನಂತರ ಪ್ರಸ್ತುತ ಲಕ್ಷಕ್ಕೂ ಹೆಚ್ಚು ಯೂನಿಕ್ ಓದುಗರನ್ನು ತನ್ನತ್ತ ಸೆಳೆದಿರುವುದು ಪಂಜುವಿನ ಹೆಗ್ಗಳಿಕೆ.

ಪಂಜುವಿನ ಮುಂದಿನ ಯೋಜನೆಗಳು:
• ಪಂಜುವಿನಲ್ಲಿ ಪ್ರಕಟವಾಗಿರುವ ಕತೆ/ ಕವನ/ ಲೇಖನಗಳಿಗೆ ಪುಸ್ತಕ ರೂಪ ಕೊಡುವುದು
• ಕಾವ್ಯ/ ಕಥಾ ಕಮ್ಮಟಗಳ ಆಯೋಜನೆಗಳನ್ನು ಹಮ್ಮಿಕೊಳ್ಳುವುದು
• ಪ್ರತಿ ವರ್ಷ ಕಾವ್ಯ/ ಕಥಾ ಸ್ಪರ್ಧೆಗಳನ್ನು ಏರ್ಪಡಿಸುವುದು
• ಡಿಜಿಟಲ್ ಮೀಡಿಯಾದಲ್ಲಿ ಇ ಪುಸ್ತಕಗಳನ್ನು ಪ್ರಕಟಿಸುವುದು


ಪಂಜು ಕುರಿತು ಲೇಖಕ/ ಓದುಗರ ಅಭಿಪ್ರಾಯಗಳು:

ಪಂಜು, ಕಳೆದ ಅರ್ಧ ದಶಕದಿಂದ ಸಾಹಿತ್ಯಿಕವಾಗಿ ಸಕ್ರಿಯವಾಗಿರುವ ಅಂತರ್ಜಾಲ ಪತ್ರಿಕೆ. ಜೇಬಲ್ಲಿ ಕಾಸಿಲ್ಲದಿದ್ದರು ಕಣ್ಣಲ್ಲಿ ಕನಸಿರಬೇಕೆಂಬ ಧ್ಯೆಯವಾಕ್ಯಕ್ಕೆ ಬದ್ಧರಾಗಿ ಮುನ್ನೆಡೆಸಿಕೊಂಡು ಬರುತ್ತಿರುವ ಒನ್ ಮ್ಯಾನ್ ಆರ್ಮಿ ಸಂಪಾದಕರಾದ ಡಾ.ನಟರಾಜು ರವರು. ಯಾವುದೇ ಪೂರ್ವಾಗ್ರಹಗಳಿಗೂ ವಾಲಿಕೊಳದೆ, ಪ್ರಾಮಾಣಿಕ ಅಭಿವ್ಯಕ್ತಿಯೊಂದೇ ಮಾನದಂಡವಾಗಿಸಿಕೊಂಡು ನಾಡಿನ ಮೂಲೆ ಮೂಲೆಗಳಿಂದ ನೂರಾರೂ ಲೇಖನಿ ಹಿಡಿದ ಬೆರಳುಗಳ ನಾಡಿ ಹಿಡಿದು, ಒಂದು ಪುಟ್ಟ ವೇದಿಕೆಗಾಗಿ ಕನವರಿಸುವ, ತಾನೂ ಒಳ್ಳೆಯ ಬರಹಗಾರನಾಗಬೇಕೆಂಬ ಆಸೆಗೆ ಇಂಬುಗೊಡುವ ಪ್ರಾಮಾಣಿಕ ಪ್ರಯತ್ನ ಪಂಜು ಪತ್ರಿಕೆಯದು. ಎಷ್ಟೋ ಜನ ಕಥಗಾರರು, ಕವಿಗಳು, ಅಂಕಣಕಾರರ ಲೇಖನಿಗೆ ಭರವಸೆಯ ಕಸುವನ್ನು ತುಂಬಿದ ಹೆಗ್ಗಳಿಕೆ ಪತ್ರಿಕೆಗಿದೆ. ಇಂದು ಪ್ರವರ್ಧಮಾನಕ್ಕೆ ಬಂದಿರುವ, ನಾನಾ ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಹಲವಾರು ಯುವ ಕವಿಗಳು, ಲೇಖಕರಿಗೆ ಆರಂಭದಲ್ಲಿ ತಿದ್ದಿ, ಬೆನ್ನು ತಟ್ಟಿ, ಬರೆಸಿ ಆತ್ಮವಿಶ್ವಾಸ ತುಂಬಿದ ಪತ್ರಿಕೆಯೂ ಇದಾಗಿದೆ. ಪೂರ್ಣಪ್ರಮಾಣದ ಸಾಹಿತ್ಯ ಪತ್ರಿಕೆ ಎಂಬ ಮಡಿವಂತಿಯನ್ನು ಸದಾ ಕಾಯ್ದುಕೊಂಡೇ ಬಂದಿರುವ, ಎಲ್ಲಾ ವಯೋಮಾನದ ನಿವೇಧನೆಗಳಿಗೆ ಸ್ಥಾನ ನೀಡಿರುವ ಪಂಜು ಸದ್ಯದ ಅತೀ ಹೆಚ್ಚಿನ ಸಂಖ್ಯೆಯ ಓದುಗ ಬಳಗವನ್ನು ಒಳಗೊಂಡಿರುವ ಅಂರ್ಜಾಲ ಪತ್ರಿಕೆ.
-ಮೌಲ್ಯ ಎಂ.

ನಮಸ್ಕಾರ ಸಹೃದಯರೇ,
ನಾನು ನಿಮ್ಮ ಅಂತರ್ಜಾಲ ಪತ್ರಿಕೆಯ ಓದುಗ ಪಾಲುದಾರನೆಂಬ ಹೆಮ್ಮೆ ಇದೆ. ‘ಪಂಜು’ ಎಂಬುದು ಉತ್ತಮ ಶೀರ್ಷಿಕೆ. ಏಕೆಂದರೆ ದೀಪ ಮನೆಗೆ ಬೆಳಕಾದರೆ ಪಂಜು ಒಂದು ಗುಂಪಿಗೆ, ಮೆರವಣಿಗೆಗೆ ಬೆಳಕಾಗುತ್ತದೆ. ನನಗೆ ಸಂಪಾದಕೀಯದ ವಸ್ತುಗಳು, ಪಂಜು- ವಿಶೇಷಗಳು, ಚುಟುಕು ಮೊದಲಾದವು ಬಹಳ ಇಷ್ಟವಾಗುವ ಕಾಲಂಗಳು. ಭಾಷೆ ಮತ್ತು ಪತ್ರಿಕೆಯ ನಿರ್ವಹಣೆಯ ರೀತಿ ಬಹಳ ಮೆಚ್ಚುಗೆಯಾಯಿತು. ಅಲ್ಲದೆ ಇಲ್ಲಿನ ವಿಷಯಗಳು ಮತ್ತು ವಿಷಯ ವಸ್ತುಗಳು ಗಂಭೀರವಾಗಿದ್ದರು ಅವಿವಾದಿತವಾಗಿ ಚರ್ಚೆಗೆ ಅವಕಾಶ ನೀಡುವಂತಹವುಗಳು. ಇದು ಸಮಾನ ಮನಸ್ಕರ ಕೂಟದಂತಿದ್ದು ಸದ್ದಿಲ್ಲದೆ ಓದುಗರಿಗೆ ಸಿಹಿಯನ್ನು ನೀಡುತ್ತಿದೆ. ನಿಮ್ಮ ಕನಸುಗಳಿಗೆ ಶುಭವಿರಲಿ
-ಆನಂದ

ಮಾನ್ಯರೇ,
ಎಷ್ಟೋ ವರುಷಗಳಿಂದ ಗೀಚಿದ ನನ್ನ ಕವನಗಳು ಬರೀ ನನಗೋಸ್ಕರವೇನೋ ಎನಿಸುವಷ್ಟು ಗೌಪ್ಯವಾಗಿ ಮುದುಡಿ ಒಂದು ಫೈಲಿನ ಪಂಜರದಲ್ಲಿ ಖೈದಿಗಳಾಗಿದ್ದವು. ಕೆಲವು ವರ್ಷಗಳ ಹಿಂದೆ ನನ್ನ ಮೊದಲ ಪ್ರಕಟಿತ ಕವನವನ್ನು ನಾನು “ಪಂಜು”ವಿನಲ್ಲಿ ನೋಡಿ ಓದಿದ್ದು ನನ್ನ ಬದುಕಿನ ಉಜ್ವಲ ಸಂತಸದ ನೆನಪುಗಳಲ್ಲಿ ಒಂದು. ಏಲ್ಲೋ ಮೂಲೆಯಲ್ಲಿ ಮಳಮಳಿಸುವ ಮುಚ್ಚಿಹೋದ ಕವಿಗಳ ಕವಿತಾ ಪ್ರಣತಿಯಲ್ಲಿ ಸುಮ್ಮನೆ ಕುಳಿತ ಬತ್ತಿಗೆ ಬೆಳಕು ಕೊಟ್ಟು ಬದುಕಿಸುತ್ತಿರುವ ಕನ್ನಡ ಕಸ್ತೂರಿ “ಪಂಜು”. ನನ್ನಂತಹ ಎಲೆಮರೆಯ ಕಾಯಿಗಳಿಗೆ ಬಿಸಿಲ ಬೆಳಕ ತೋರಿದ “ಪಂಜು”ವಿಗೆ ಎಂದೆಂದಿಗೂ ಚಿರಋಣಿ. “ಪಂಜು”ವಿನಲ್ಲಿ ಪ್ರಕಟವಾಗುವ ಅನುರಣನಶೀಲವಾದ ಪುಟ್ಟ ಪುಟ್ಟ ಲೇಖನಗಳು,ಚುಟುಕುಗಳು, ಕವಿತೆಗಳು ಹಾಗು ಪ್ರಬಂಧಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ. ಒಂದು ಆಳವಾದ ಅನುಭವವನ್ನು ಉಕ್ಕಿಸುತ್ತವೆ. “ಪಂಜು”ವಿನಲ್ಲಿ ಹುಸಿ ರಮ್ಯತೆಯ ಭಾವುಕತೆಯಲ್ಲ. ಚಿಂತನೆ ಅಥವಾ ವೈಚಾರಿಕತೆಯ ಉಗ್ರಾಣವಿದೆ
ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಜೀವತಳೆದ ಪತ್ರಿಕೆ “ಪಂಜು” ಪತ್ರಿಕೆ.
ಮಾಧವ.ಕುಲಕರ್ಣಿ, ಪುಣೆ

ತುಂಬಾ ಒಳ್ಳೆಯ ಮತ್ತು ನಮ್ಮ ಬರಹದ ಕುರಿತು ಅತಿ ಬೇಗನೆ ಪ್ರತಿಕ್ರಿಯಿಸುವ.. .ಪ್ರತಿ ಮನದ ಕನ್ನಡ ಸಿಂಚನವ ಮನದಲ್ಲಿ ತುಂಬುವ …ಎಲ್ಲಾ ರೀತಿಯಲ್ಲೂ ಪ್ರಮುಖವಾದ ಒಂದು ಅಂತರ್ಜಾಲ ಪತ್ರಿಕೆ….
ಗಾಯತ್ರಿ ಭಟ್

ಅಂತರ್ಜಾಲದಲ್ಲಿ ಪಂಜು ಪತ್ರಿಕೆ ಒಳ್ಳೆ ಪ್ರಯೋಗ. ಫೋನ್ ಬಳಸುವ ಓದುಗರಿಗೆ ಓದಿಸುವ ಪ್ರಯತ್ನ..
-ಬೆನೆಟ್ ಅಮ್ಮನ್ನ

ಪಂಜು ತನ್ನನ್ನು ಯಾವುದೇ ರಾಜಕೀಯ ಮತ್ತದರಾಚೆಯ ಯಾವುದಕ್ಕೂ ತೆರದುಕೊಳ್ಳದೆಯೇ ಪೂರ್ಣ ಪ್ರಮಾಣದಲ್ಲಿ ಸಾಹಿತ್ಯಕ್ಕೆ ಮಾತ್ರವೆ ಅರ್ಪಿಸಿಕೊಂಡಿದೆ. ಸೃಜನ, ಸೃಜನೇತರ ಸಾಹಿತ್ಯದ ಜೊತೆ ಜೊತೆಗೆ ಕಾರ್ಟೂನ್, ಚಿತ್ರ ಕಲೆಗೂ ಕೂಡ ಪ್ರಾಶಸ್ತ್ಯ ಕೊಡುತ್ತಾ ಬೆಳೆಯುತ್ತಾ ಬೆಳೆಸುತ್ತಾ ಸಾಗುತ್ತಿರುವ ಕನ್ನಡದ ಅಂತರ್ಜಾಲ ಪತ್ರಿಕೆಯಾಗಿದೆ.
ಕೃಷ್ಣ ಶ್ರೀಕಾಂತ ದೇವಾಂಗಮಠ ನೇಕಾರ ಓಣಿ , ರಾಧಾಪುರ ಪೇಟ್

ಪಂಜು ಪತ್ರಿಕೆಯು ಅಂತರ್ಜಾಲ ತಾಣಗಳಲ್ಲಿ ತನ್ನದೇ ಆದ ಓದುಗ ವಲಯವನ್ನು ಹೊಂದಿದ್ದು ತನ್ನದೇ ಛಾಪು ಮೂಡಿಸುವಲ್ಲಿ ಯಶ ಕಂಡಿದೆ.ಸಾಹಿತ್ಯಿಕ ಸೃಜನಶೀಲ ಬರಹಗಳಿಂದ ಕೂಡಿದ ಬರಹಗಳು ಓದುಗರ ಜ್ಞಾನಾತ್ಮಕ ಹಾಗೂ ಭಾವನಾತ್ಮಕ ವಲಯವನ್ನು ವೃದ್ಧಿಸುವಲ್ಲಿ ಸಹಕಾರಿ ಆಗಿದೆ.ಸಾಮಾಜಿಕ ಕಳಕಳಿಯುವುಳ್ಳ ಪರಿಸರ ರಕ್ಷಣೆಯ ಲೇಖನಗಳು ಓದುಗರನ್ನು ಎಚ್ಚರಿಸುತ್ತಿವೆ .ಪಂಜು ಪತ್ರಿಕೆ ಒಂದು ಮಾದರಿ ಅತ್ಯುತ್ತಮ ಪತ್ರಿಕೆಯಾಗಿ ಹೊರ ಹೊಮ್ಮಿದೆ ಎಂದು ಹೇಳಲು ಹರ್ಷವೆನಿಸುತ್ತದೆ.
ಜಯಶ್ರೀ. ಅಬ್ಬಿಗೇರಿ ಬೆಳಗಾವಿ

ಪಂಜು ಬಳಗಕ್ಕೆ ನನ್ನ ಶುಭಾಶಯಗಳು. ಅಂತರ್ಜಾಲ ತಾಣವಾದ ಪಂಜು ಪತ್ರಿಕೆಯ ಬಗ್ಗೆ ಬರೆಯುವ ಅವಕಾಶ ನನಗೆ ಒದಗಿ ಬಂದುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ. ಪಂಜು ನಡೆದು ಬಂದ ದಾರಿಯೇ ರೋಚಕ. ಉದಯೋನ್ಮುಖ ಬರಹಗಾರರಿಗೆ ತಮ್ಮ ಸೃಜನಶೀಲ ಬರಹಗಳನ್ನು ಪ್ರಕಟಗೊಳಿಸುವ ಒಂದು ಉತ್ತಮ ವೇದಿಕೆಯಾಗಿದೆ. ಪಂಜುವಿನ ಬರವಣಿಗೆಗಳ ಮೆರವಣಿಗೆ ಹೀಗೆಯೇ ಸಾಗಲಿ ಮತ್ತು ಓದುಗರನ್ನು ಚಿಂತನೆಗೆ ಹಚ್ಚುವ ಕೆಲಸ ನಿರಂತರವಾಗಿ ಸಾಗಲಿ.
ಕಮಲ ಬೆಲಗೂರ್.

ಪಂಜು ಪತ್ರಿಕೆ….
ನೂರಾರು ಉತ್ಸಾಹಿ ಕವಿಗಳನ್ನು ಬರಹಗಾರರನ್ನು ಸೃಷ್ಟಿಸಿದ ವೇದಿಕೆ…ಇವತ್ತು ಅನೇಕ ಪತ್ರಿಕೆ ಮತ್ತು ದೃಶ್ಯಮಾಧ್ಯಮದಲ್ಲಿ ಬರೆಯುತ್ತಿರುವ, ಮತ್ತು ಹವ್ಯಾಸಿಯಾಗಿ ಬರೆದು ಹೆಸರಾಗಿರುವ ಅನೇಕ ಬರಹಗಾರರ ಬರಹದ ಬದುಕು ಇಲ್ಲಿಂದಲೇ ಆರಂಭವಾದದ್ದು. ಪ್ರಖ್ಯಾತರಿಂದಲು ಅನೇಕ ಉಪಯುಕ್ತ ವೈಚಾರಿಕ ಲೇಖನ ಬರೆಸಿದ ಕೀರ್ತಿ ಈ ಅಂತರ್ಜಾಲ ಪತ್ರಿಕೆಯದ್ದು. ಪ್ರತಿ ವಿಶೇಷಾಂಕಗಳೂ ಸಂಗ್ರಹ ಯೋಗ್ಯ. ನನ್ನ ಬರಹದ ಸಾಂಗತ್ಯ ಶುರುವಾದದ್ದು ಪಂಜು ಪತ್ರಿಕೆಯಿಂದಲೇ… ನಿರಂತರ ಐದು ವರ್ಷಗಳಿಂದ ಕನ್ನಡದ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಪಂಜು ಪತ್ರಿಕೆ ನನ್ನ ಅಭಿಮಾನ…ಈ ಪಯಣ ನಿಲ್ಲದಿರಲಿ… ಒಳ್ಳೊಳ್ಳೆಯ ವೈಚಾರಿಕ ಲೇಖನಗಳಿಂದ ಮನಗೆಲ್ಲುತ್ತಿರಲಿ.
ಶಮ್ಮಿ ಸಂಜೀವ್

“ಪಂಜು” ಅಂತರ್ಜಾಲ ತಾಣದಲ್ಲಿ ನನಗೆ ತುಂಬಾ ಇಷ್ಟವಾದ ಮ್ಯಾಗಜಿನ್. ಹೊಸಬರಿಗೆ…ಹೊಸತನ ಬಯಸುವ ಜನರಿಗೆ ತುಂಬಾ ಸಹಕಾರಿಯಾಗಿದೆ.ಪಂಜುವಿನಲ್ಲಿ ನನ್ನ ಲೇಖನಗಳು, ಕತೆಗಳು ಹಾಗೂ ಅಡುಗೆ ಲೇಖನವನ್ನು ಅವರೊಂದಿಗೆ ಹಂಚಿ ಕೊಂಡಿದ್ದೇನೆ. ಹೊಸ ಹೊಸ ಪ್ರತಿಭೆಗಳನ್ನು ಸೆಳೆಯುತ್ತಿರುವ ಪಂಜು ಮ್ಯಾಗಜಿನ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆನಿಸುತ್ತದೆ. ಈ ಮ್ಯಾಗಜಿನ್ ಸಾಹಿತ್ಯದ ಹಲವಾರು ಪ್ರಕಾರದ ಲೇಖನಗಳನ್ನು ತನ್ನ ಮುಡಿಯಲ್ಲಿರಿಸಿಕೊಂಡಿದೆ. “ಪಂಜು”ಇನ್ನೂ ಹೆಚ್ಚಿನ ಯಶಸ್ಸುಗಳಿಸಲಿಯೆಂದು ಹಾರೈಸುತ್ತೇನೆ.
ವೇದಾವತಿ ಹೆಚ್. ಎಸ್.

ಪಂಜು ಪತ್ರಿಕೆಯು ಅತ್ಯುತ್ತಮ ಅಂತರ್ಜಾಲ ಪತ್ರಿಕೆಯಾಗಿದ್ದು ಉತ್ತಮ ಬರಹಗಳನ್ನು ಪ್ರಕಟಿಸುತ್ತಾ ಸಾಹಿತಿಗಳನ್ನು ಪ್ರೋತ್ಸಾಹಿತ್ತಾ ಬಂದಿದೆ. ಜಗತ್ತಿನಾದ್ಯಂತ ಓದುಗರನ್ನು ಹೊಂದಿರುವ ಪಂಜು ಪತ್ರಿಕೆ ನಮ್ಮೆಲ್ಲರ ಮೆಚ್ಚಿನ ಪತ್ರಿಕೆಯಾಗಿದೆ.ಧನ್ಯವಾದಗಳು
ಎನ್. ಶೈಲಜಾ ಹಾಸನ

ಪ್ರೀತಿಯಿಂದ ಪಂಜುವಿಗಾಗಿ…
ಆವಾಗಿನ್ನೂ ನನ್ನಲ್ಲಿಯ ಪುಟ್ಟ ಲೇಖಕಿ ಇಣುಕಿ ನೋಡಿ ಹೆಜ್ಜೆ ಇಡಲು ಹವಣಿಸುತಿದ್ದಾಗ ಕಾಣಿಸಿದ್ದು ” ಪಂಜು” ವಿನ ಅಂಗಳ.
ಜೀವನದ ಅನುಭವಗಳ ಥಳಿಯ ಸಿಂಪಡಿಸಿ, ಸಾರಿಸಿ, ಸಿಹಿ ಕಹಿ ನೆನಪುಗಳ ಚುಕ್ಕೆ ಇಟ್ಟು. ಭಾವಗಳ ಅಕ್ಷರಗಳಿಂದ ಪದಗಳ ರಚಿಸಿ. ಪದಗಳಿಂದ ” ಪಂಜು”ವಿನಂಗಳದಿ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದು ಜೀವನದ ಸುಂದರ ಅನುಭವ.
ಎಲ್ಲರನ್ನೂ ಸ್ವಾಗತಿಸಿ ಅವಕಾಶ ನೀಡಿ ಪ್ರೋತ್ಸಾಹಿಸುವುದು ” ಪಂಜು” ವಿನ ವಿಶೇಷ.
“ಪಂಜು”ವಿನಂಗಳದಿ ಬರೆದು ನಲಿದು ಲೇಖಕಿಯೆನ್ನಿಸಿಕೊಂಡ ಹೆಮ್ಮೆ ನನ್ನದು…
ಪತ್ರಿಕೆಯ ಸಹೃದಯ ಸಂಪಾದಕೀಯ ವರ್ಗಕ್ಕೆ ಹೃತ್ಪೂರ್ವಕ ಧನ್ಯವಾದಗಳೊಂದಿಗೆ,,
ಸುಮನ್ ದೇಸಾಯಿ..

ಪಂಜು ಪತ್ರಿಕೆ ಓದುಗರಿಗೆ ತುಂಬಾ ಅನುಕೂಲರವಾಗಿದ್ದು. ಒಳ್ಳೆಯ ಸಾಹಿತ್ಯ ವಿಚಾರಗಳ ಗುಚ್ಛದಂತಿದೆ. ಪಂಜು ಪತ್ರಿಕೆ ಹೀಗೆ ನಿರಂತರವಾಗಿ ಸಾಗುತಿರಲಿ, ಇನ್ನೂ ಹೆಚ್ಚಿನ ಓದುಗರನ್ನು ಸಂಪಾದಿಸಲಿ.
“ಪಂಜು ಪತ್ರಿಕೆಗೆ ನನ್ನ ಅಭಿನಂದನೆಗಳು”.
ಮಂಜುನಾಥ್

ಕನ್ನಡ ಅಂತರ್ಜಾಲ ಪಂಜು ಮೊದಲಿನಿಂದಲೂ ಇಂದಿನವರೆಗೂ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸಿದೆ… ಯಾವ ಸ್ವಂತಿಕೆ ಇಲ್ಲದೆ ಸ್ವಾರ್ಥವಿಲ್ಲದೆ ಯಾರದೇ ಪ್ರತಿಷ್ಠೆಗೆ ಒಳಗಾಗದೆ ಓದುಗರಿಗೆ ಅತ್ಯುತ್ತಮ ಬರಹಗಳನ್ನು ನೀಡುತ್ತಿರುವ ಏಕೈಕ ಕನ್ನಡ ತಾಣ ಪಂಜು – ಶುಭವಾಗಲಿ ಕಳುಹಿಸಿ…
-ಮಂಜು ದೊಡ್ಡಮನಿ

ಪಂಜು ಎನ್ನುವ ಹೆಸರೇ ತುಂಬಾ ಸೊಗಸು ಮತ್ತು ಅರ್ಥಪೂರ್ಣ.ಅರಿವಿನ ಬೆಳಕನ್ನು ಹೊತ್ತಿಸುವ ಸಂಕೇತ ಎಂದು ನಾನು ಅರ್ಥೈಸುತ್ತೇನೆ. ಪಂಜುವಿನಲ್ಲಿ ಪ್ರಕಟವಾಗುವ ಕಥೆ ಬರಹಗಳು ಉತ್ತಮವಾಗಿದ್ದು ಮುಂದಿನ ಸಂಚಿಕೆಯನ್ನು ಎದುರು ನೋಡುವಂತಾಗುತ್ತದೆ. ಪಂಜುವಿಗಾಗಿ ಬರೆದ ಅನುಭವ ನನಗೆ ತುಂಬಾ ಖುಷಿ ಕೊಟ್ಟಿದೆ. ನನ್ನ ಮೊದಲ ಕಥ ಪ್ರಕಟಿಸಿದ ಪಂಜುವಿಗೆ ಮತ್ತು ಪಂಜು ಬಳಗಕ್ಕೆ ನಾನು ಸದಾ ಋಣಿ
-ನಂದಾ ಹೆಗಡೆ

ಪಂಜು ಪತ್ರಿಕೆಯ ಗುಣ ವೈಶಿಷ್ಟ್ಯವೆಂದರೆ ಕತ್ತಲಿನಲ್ಲಿರುವ ಹವ್ಯಾಸಿ ಬರೆಹಗಾರರನ್ನು ಪಂಜು ಹಿಡಿದು ಹುಡುಕಿ ಅವರ ಬರಹವನ್ನು ಪ್ರಕಟಿಸಿ ಪ್ರೋತ್ಸಾಹಿಸುವುದು. ಅಂತರ್ಜಾಲದ ಮುಖಾಂತರ ಪತ್ರಿಕೆ ನಡೆಸಿ ಯಶಸ್ವಿ ಹೆಜ್ಜೆಯನ್ನಿರಿಸಿರುವ ಈ ಪತ್ರಿಕೆ ಪ್ರಶಸ್ತಿ ಪುರಸ್ಕಾರಗಳಿಗೆ ಅರ್ಹವಾಗಿದೆ.
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ, ಮುಂಬಯಿ

ಮಾನ್ಯರೇ ,
ಕನ್ನಡ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ ಕನ್ನಡ ಅಂತರ್ಜಾಲ ತಾಣಗಳ ಪ್ರಶಸ್ತಿ ಸ್ಪರ್ಧೆಯಲ್ಲಿ ನನ್ನ ಸಂಪೂರ್ಣ ಬೆಂಬಲ ಪಂಜು ಪತ್ರಿಕೆಗೆ ಮಾತ್ರ. ಅಂತರ್ಜಾಲ ಜಗತ್ತಿನಲ್ಲಿ ಕನ್ನಡಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪಂಜು ಪತ್ರಿಕೆಗೆ ನನ್ನ ಹೃತ್ಪೂರ್ವಕ ಬೆಂಬಲವಿದೆ. ಓದುಗರ ಓದುವ ತುಡಿತವನ್ನು ತನ್ನದೇ ಆದ ರೀತಿಯಲ್ಲಿ ತಣಿಸುತ್ತಿರುವ ಪಂಜಿನ ಕೊಡುಗೆ ಕನ್ನಡಕ್ಕೆ ಅಗಾಧವಾದುದು ಮತ್ತು ಅತ್ಯಮೂಲ್ಯವಾದುದು. ಪಂಜುಗೆ ಶುಭ ಹಾರೈಕೆಗಳನ್ನು ಹಾರೈಸುತ್ತಾ ಮತ್ತೊಮ್ಮೆ ನನ್ನ ಬೆಂಬಲವನ್ನು ಸೂಚಿಸುತ್ತಿದ್ದೇನೆ.
ಧನ್ಯವಾದಗಳೊಂದಿಗೆ..
ಸುಹಾಸಿನಿ

ಪಂಜು ಕಥೆ ಕವನ ಲೇಖನಗಳೊಂದಿಗೆ ವೈವಿಧ್ಯಮಯ ಬರಹಗಳ ಮೇಳದಲ್ಲಿ ಮೈದುಂಬಿಕೊಂಡು ಭಾವ ಬುದ್ಧಿ ವಿಚಾರಗಳನ್ನ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಸಶಕ್ತ ಹೆಜ್ಜೆಗಳನ್ನೂರಿ ಪತ್ರಿಕಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಹೊಸದಾಗಿ ಬರವಣಿಗೆಯ ಬಯಲಿಗಿಳಿದವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ವೇದಿಕೆಯಾದ ಪಂಜುವಿಗೆ ಧನ್ಯವಾದಗಳು. ಪಂಜು ದಿನದಿಂದ ದಿನಕ್ಕೆ ತನ್ನ ಓದುಗರನ್ನು ಹೆಚ್ಚಿಸಿಕೊಳ್ಳುತ್ತಿರುವದು ತುಂಬಾ ಸಂತಸ ತಂದಿದೆ. ಪಂಜುವಿನ ಓದುಗಳಾಗಿ ಬರಹಗಾರ್ತಿಯಾಗಿ ಸದಾ ಶುಭವನ್ನು ಹಾರೈಸುತ್ತೇನೆ.
ಪ್ರೇಮ ಟಿ ಎಂ ಆರ್

ಅಂತರ್ಜಾಲ ಪತ್ರಿಕೆಗಳಲ್ಲಿಯೇ “ಪಂಜು” ಬಹಳ ವಿಭಿನ್ನ ಮತ್ತು ಮಹತ್ವದ ಪತ್ರಿಕೆ.. ಸುಮಾರು ಸಾವಿರಕ್ಕೆ ಸಮೀಪದ ಬರಹಗಾರರು ಈ ಪತ್ರಿಕೆಗೆ ಬರೆದಿದ್ದಾರೆ ಬರೆಯುತ್ತಿದ್ದಾರೆ ಎಂಬುದು ಯಶಸ್ಸಿನ ಸೂಚಕವೇ ಹೌದು.. ಪಂಜು ನನ್ನಂತಹ ಅನೇಕ ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ ಹಾಗೆಯೇ ಪಂಜುವಿನಲ್ಲಿ ತಮ್ಮ ಮೊದ ಮೊದಲ ಬರಹಗಳನ್ನು ಬರೆದ ಹೆಚ್ಚಿನ ಲೇಖಕರು ಈ ಹೊತ್ತಿಗೆ ಬಹಳ ಮಹತ್ವದ ಬರಹಗಾರರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.. ಬಹುತೇಕ ಯುವ ಲೇಖಕರನ್ನೇ ಹೊಂದಿರುವ ಪಂಜು ಎಲ್ಲಾ ವಯೋಮಾನದ ಅಪಾರ ಓದುಗರನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ.. ಸುಮಾರು ಆರು ವರುಷಗಳಿಂದ ಭಾಷೆ, ಸಾಹಿತ್ಯಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು, ಯುವಜನರನ್ನು ಉತ್ತೇಜಿಸುತ್ತಿರುವ ಪರಿ ಅಭಿನಂದನೀಯವಾದದ್ದು.. ನಾನು ಪಂಜುವಿನ ನಿರಂತರ ಓದುಗ ಮತ್ತು ಬರಹಗಾರ ಎಂಬುದು ನನ್ನ ಹೆಮ್ಮೆ…..
ಸಚಿನ್ ಅಂಕೋಲಾ

ಮೊದಲು ಓದುಗನಾಗಿ ಹಾಗೂ ನಂತರದಲ್ಲಿ ಅಂಕಣಕಾರನಾಗಿ “ಪಂಜು ಪತ್ರಿಕೆ”ಯನ್ನು ಆರಂಭದಿಂದ ಓದುತ್ತಿದ್ದೇನೆ. ಅಂತರ್ಜಾಲ ಪತ್ರಿಕಾ ತಾಣಗಳಲ್ಲಿ ಅತ್ಯುತ್ತಮ ಅಂತರ್ಜಾಲ ಪತ್ರಿಕೆಯಾಗಿದೆ. ಈ ಪತ್ರಿಕೆಯಲ್ಲಿ ಎಲ್ಲಾ ಪ್ರಾಕಾರದ ಬರಹಗಳು ಲಭ್ಯ. ಕತೆ-ಕವನ-ವ್ಯಂಗ್ಯಚಿತ್ರದ ಜೊತೆಗೆ ವೈಚಾರಿಕತೆ ಬರಹಗಳು, ಪ್ರವಾಸಕಥನಗಳು ಇತ್ಯಾದಿಗಳು ಲಭ್ಯವಿದೆ. ವಿನೂತನ ರೀತಿಯಲ್ಲಿ ಪ್ರಕಟವಾಗುವ ಹಾಗೂ ಎಲ್ಲಾ ವರ್ಗದವರನ್ನೂ ಸೆಳೆಯುವ “ಪಂಜು ಪತ್ರಿಕೆ” ಅಂತರ್ಜಾಲ ಪತ್ರಿಕೆಗಳಿಗೆ ಮಾದರಿಯಾಗಿದೆ.
ಅಖಿಲೇಶ್ ಚಿಪ್ಪಳಿ

ಪಂಜು ಪತ್ರಿಕೆಯು, ಅಂತರ್ಜಾಲ ಪತ್ರಿಕೆಗಳಲ್ಲಿ ನಿಶ್ಚಿತವಾಗಿಯೂ ಅತ್ಯುತ್ತಮ ಪತ್ರಿಕೆಗಳಲ್ಲಿ ಒಂದಾಗಿದೆ. ಈ ಪತ್ರಿಕೆ ಉದಯೋನ್ಮುಖ ಬರಹಗಾರರಿಗೆ ಒಂದು ಪ್ರಮುಖ ವೇದಿಕೆ. ಇಲ್ಲಿಯ ಕಥೆ, ಕವನ ಹಾಗೂ ಸಾಹಿತ್ಯಿಕ ಲೇಖನಗಳು ಓದುಗರಿಗೆ ಆಕರ್ಷಕವಾಗಿಯೂ, ಉತ್ತಮ ಗುಣ ಮಟ್ಟದಿಂದ ಕೂಡಿದವೂ ಆಗಿರುವುದರಿಂದ, ಪತ್ರಿಕೆಯು ಓದುಗರನ್ನು ತನ್ನತ್ತ ಸೆಳೆಯುತ್ತಿದೆ. ಈಗಿರುವ ಲೇಖನದ ಪ್ರಕಾರಗಳೊಂದಿಗೆ, ಸಾಹಿತ್ಯದ ಹಾಗೂ ಸಮಕಾಲೀನ ಚರ್ಚೆಗಳು ಇದ್ದಲ್ಲಿ ಪತ್ರಿಕೆ ಇನ್ನಷ್ಟು ಹೊಳಪಾಗಬಹುದು. ಪತ್ರಿಕೆಯ ಪ್ರಸಾರ ಇನ್ನೂ ಹೆಚ್ಚಾಗಲಿ ಹಾಗೂ ಪ್ರಶಸ್ತಿಗಳು ಲಭ್ಯವಾಗಲಿ ಎಂದು ಆಶಿಸುತ್ತೇನೆ.
ವೃಂದಾ

ಪಂಜುವಿನ ಬೆಂಕಿಯಂತಹಾ ಬೆಳಕಿನಲ್ಲಿ ಹಲವಾರು ಕವಿಗಳ, ಲೇಖಕರ ಸಾಹಿತ್ಯ ಸಾಣೆ ಹಿಡಿದು ಹೊಳೆಯುತ್ತಿದೆ. ಕಥೆ, ಕವಿತೆ, ಲಲಿತ ಪ್ರಬಂಧ, ಪತ್ರ, ಸಾಮಾಜಿಕ ಕಳಕಳಿಯ ಲೇಖನಗಳು, ಮಕ್ಕಳ ಸಾಹಿತ್ಯ, ಅಂಕಣಬರಹ, ಇನ್ನೂ ಮುಂತಾದ ವೈವಿಧ್ಯಮಯ ವಿಭಾಗಗಳನ್ನು ಒಳಗೊಂಡ ಪಂಜು ಉತ್ತಮ ಜ್ಞಾನ ನೀಡುವುದರೊಂದಿಗೆ, ಎಲೆಮರೆಯ ಪ್ರತಿಭೆಗಳನ್ನೂ ಬೆಳಕಿಗೆ ತಂದಿದೆ. ಇವರ ಉತ್ತಮ ಪ್ರಯತ್ನ ಹೀಗೇ ಮುಂದುವರಿಯಲಿ ಎಂಬ ಹಾರೈಕೆ ಮತ್ತು ಆಶಯ ನನ್ನದು.
ವಿಭಾ ವಿಶ್ವನಾಥ್

“ಪ೦ಜು ಪ್ರತಿಭಾವ೦ತ ಬರಹಗಾರರಿಗೆ ಪ್ರೋತ್ಸಾಹಿಸಿ ಬೆಳೆದ ಹಾದಿ. ಇಲ್ಲಿ ಸೊಗಸಿದೆ, ಹಸಿರಿದೆ, ಜೀವವಿದೆ. ಈ ಹಾದಿ ಕನ್ನಡ ಸಾಹಿತ್ಯವನ್ನು ಬೆಳೆಸುತ್ತಾ ಹೊಗಲಿ”.
-ಉರ್ಬಾನ್ ಡಿಸೋಜ.

ನಿಮ್ಮದೊಂದು ಉತ್ತಮ ಪತ್ರಿಕೆ, ನೀವು ಎಲ್ಲಾ ಅಭಿರುಚಿ ಇರುವ ಸಾಹಿತ್ಯ ಮೊಳಕೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುವಿರಿ, ನನ್ನ ಕವನವನ್ನು ಕೂಡ ನಿಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿ ನಮ್ಮಂತ ಎಷ್ಟೋ ಪ್ರತಿಭೆಗಳಿಗೆ ಅವಕಾಶ ಒದಗಿಸಿರುವಿರಿ, ನಿಷ್ಪಕ್ಷಪಾತವಾಗಿ ನಿರ್ವಹಣೆ ಮಾಡುವ ನಿಮ್ಮ ಪತ್ರಿಕಾ ಮಾಧ್ಯಮಕ್ಕೆ ಪ್ರಶಸ್ತಿ ನೀಡುವುದು ಅತಿಶಯೋಕ್ತಿ ಅಲ್ಲ, ನಿಮ್ಮ ಪತ್ರಿಕೆ ಇನ್ನು ಉನ್ನತಕ್ಕೆ ಬೆಳಯಲಿ ಎಂಬುದೇ ನಮ್ಮೆಲ್ಲ ಓದುಗ ಮಿತ್ರರ ಆಶಯ.
ಚೌಡ್ಲಾಪುರ ಸೂರಿ ಕೋಟೆಹಾಳು

ಕನ್ನಡದಲ್ಲಿ ಹಲವಾರು ಪತ್ರಿಕೆಗಳು, ಅಂತರ್ಜಾಲ ಪತ್ರಿಕೆಗಳಿವೆ. ಆದರೂ ಎಲ್ಲಾ ಬರಹಗಾರರಿಗೆ ಇದರಲ್ಲಿ ಸ್ಥಳಾವಕಾಶ ದೊರೆಯುವುದು ದೂರದ ಮಾತು. ಇತ್ತೀಚೆಗೆ ಸಾಮಾಜಿಕ ಮಾದ್ಯಮಗಳೇ ಹೊಸ ತಲೆಮಾರಿನ ಅಭಿವ್ಯಕ್ತಿಯ ಕೇಂದ್ರಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಬರಹಗಾರರಿಗೆ ಅವಕಾಶ ನೀಡುವ ಜೊತೆಗೆ ಅವರನ್ನು ಪ್ರೋತ್ಸಾಹಿಸುವ ಬಲುದೊಡ್ಡ ಕಾರ್ಯವನ್ನು ಪಂಜು ಅಂತರ್ಜಾಲ ಪತ್ರಿಕೆ ಮಾಡುತ್ತಿದೆ. ಹೀಗೆ ಪ್ರೋತ್ಸಾಹ ಪಡೆದವರಲ್ಲಿ ನಾನೂ ಒಬ್ಬ ಎಂದು ಹೇಳಲು ನನಗಂತೂ ಹೆಮ್ಮೆ. ಪಂಜು ಪತ್ರಿಕೆ ಒಮ್ಮೆ ಅಪ್ಲೋಡ್ ಆಯಿತೆಂದರೆ ಅದು ಓದುಗರಿಗೆ ಹಬ್ಬ. ಏಕೆಂದರೆ ಅದು ಕೆಲವೇ ಕೆಲವು ಬರಹಗಾರರಿಗಷ್ಟೇ ಸೀಮಿತವಲ್ಲ. ಕರ್ನಾಟಕದ ಮೂಲೆಮೂಲೆಯ ದನಿ ಅದರಲ್ಲಿದೆ. ಇಂತಹ ಪತ್ರಿಕೆ ನಡೆಸುವ ಹಿಂದಿನ ಶ್ರಮ ಲೆಕ್ಕಾಚಾರಕ್ಕೆ ನಿಲುಕದ್ದು. ಪಂಜು ಪತ್ರಿಕೆ ನಮ್ಮೆಲ್ಲರ ಹೆಮ್ಮೆ.
ವಿಲ್ಸನ್ ಕಟೀಲ್

ಪಂಜು ಪತ್ರಿಕೆ ಆರಂಭವಾದಗಿನಿಂದ ಒದುತ್ತ ಬಂದಿದ್ದಿನಿ ಜೊತೆಗೆ ಒಂದು ಲೇಖನವನ್ನು ಬರೆದಿದ್ದೇನೆ ಕೂಡ. ಪಂಜು ಪತ್ರಿಕೆ ಅಂತರ್ಜಾಲ ಪತ್ರಿಕೆಗಳಲ್ಲೆ ಒಂದು ವಿಶಿಷ್ಠವಾದ ಪತ್ರಿಕೆ ಕಾರಣ ನಾ ಗಮನಿಸಿದಂತೆ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ ಅವರಿಂದ ಬರೆಸಿ ಸಾಕಷ್ಟು ಹೊಸ ಬರಹಗಾರರಿಗೆ ವೇದಿಕೆಯಾಗಿದೆ. ಇವುಗಳ ಜೊತೆಗೆ ಹೊಸ ತರದ ಪ್ರಯೋಗಗಳನ್ನು ಮಾಡಿತ್ತಿದೆ. ಕೇವಲ ಸಾಹಿತ್ಯ ಮಾತ್ರವಲ್ಲದೆ ಪರಿಸರ ಜಾಗೃತಿಯ ಕುರಿತು ಅಂಕಣ ಪ್ರಕಟಿಸುತ್ತಿದೆ. ಇವೆಲ್ಲದರ ಹೊರತಾಗಿ ಮುಖ್ಯವಾದ ವಿಷಯವೆಂದರೆ ಸಾಮಾಜಿಕ ತಾಣದಲ್ಲಿ ನಡೆಯುವ ಸೈದ್ಧಾಂತಿಕ ನಿಲುವುಗಳಾದ ಎಡಬಲ ಜಾಂಜಟಗಳ ಹಂಗಿಲ್ಲದೆ ಕೇವಲ ಸಾಹಿತ್ಯ, ಉತ್ತಮ ಲೇಖನಗಳಿಂದ ಒದುಗರ ಮನ ತಣಿಸುವ ಜೊತೆಗೆ ಬರಹಗಾರರಿಗೆ ಬರಯಲು ಸ್ಪೂರ್ತಿ ನೀಡಬಲ್ಲ ಕನ್ನಡ ಅಂತರ್ಜಾಲದಲ್ಲಿ ನಂಬರ್ ಒನ್ ಪತ್ರಿಕೆ ಎಂಬುದು ನನ್ನ ಅಭಿಪ್ರಾಯ
ಉತ್ತಮ್ ದಾನಿಹಳ್ಳಿ

ಕಳೆದ ಹಲವು ವರ್ಷಗಳಲ್ಲಿ ‘’ಪಂಜು” ಬ್ಲಾಗ್ ಮ್ಯಾಗಜೈನ್ ಜಾಲತಾಣದಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕನ್ನಡ ಭಾಷೆ ಬಳಸುವವರು ಕಡಿಮೆಯಾಗುತ್ತಿದ್ದಾರೆ, ಭಾಷೆ ಅಳಿಯುವ ಹಂತಕ್ಕೆ ಜಾರುತ್ತಿದೆ ಎನ್ನುವವರ ಮಾತನ್ನು ಸುಳ್ಳು ಮಾಡಿದೆ ‘ಪಂಜು’. ಇಂದು ಕನ್ನಡದಲ್ಲಿ ಬರೆಯುವವರ ಸಂಖ್ಯೆ ಅಚ್ಚರಿಗೊಳ್ಳುವಂತೆ ಹೆಚ್ಚಿದೆ! ಹಾಗೆಯೇ ಓದುವವರ ಸಂಖ್ಯೆ ಕೂಡ ಹೆಚ್ಚಿದೆ; ಸಂವಹನ ಮಾಧ್ಯಮ ಮಾತ್ರ ಬದಲಾಗಿದೆ. ತಂತ್ರಜ್ಞಾನದ ಪ್ರಭಾವದಿಂದ ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮವಾಗಿ ಬದಲಾಗಿದೆ, ಬದಲಾಗುತ್ತಲೂ ಇದೆ! ಈ ಪ್ರಕ್ರಿಯೆ ನಿರಂತರವಗಿ ನಡೆಯುತ್ತಿದೆ. ಇಂತ ಬದಲಾವಣೆಗಳು ಸಹಜ ಮತ್ತು ಅಪೇಕ್ಷಣೀಯ ಎನ್ನುವುದನ್ನು ‘ಪಂಜು’ವಿಗೆ ಬರೆಯುವವರು ಮತ್ತು ‘ಪಂಜು’ವನ್ನು ಓದುವವರು ಪ್ರಮಾಣಿಸಿದ್ದಾರೆ.

ಇಂದಿನ ಲೇಖಕರ ಬರಹಗಳನ್ನು ಪ್ರಕಟಿಸಲು ಪ್ರಸ್ತುತದಲ್ಲಿರುವ ಮುದ್ರಣ ಮಾದ್ಯಮ ಪತ್ರಿಕೆಗಳ ಸಂಖ್ಯೆ ಏನೇನೂ ಸಾಲವುದಿಲ್ಲ! ಅಷ್ಟಲ್ಲದೆ ಈಗಿರುವ ಪತ್ರಿಕೆಗಳು ಪ್ರಕಟಣೆಗಾಗಿ ತೆಗೆದುಕ್ಕೊಳ್ಳುವ ಸಮಯ ಏಳೆಂಟು ತಿಂಗಳಿಂದ ಹಿಡಿದು ವರ್ಷಗಳು! ಇಷ್ಟೂ ಸಮಯದಲ್ಲಿ ಲೇಖಕರಿಗೆ ತಮ್ಮ ಬರಹ ಪ್ರಕಟವಾಗುವುದೋ ಎಲ್ಲವೋ ಎಂಬ ಸುಳಿವೂ ಸಹ ಇರುವುದಿಲ್ಲ. ಇಂತಾ ವ್ಯವಸ್ಥೆಯನ್ನು ಯಾರೂ ಸಹ ಸಹಿಸಲಾರರು. ಇಂತಾ ಪರಿಸ್ಥಿತಿಯಲ್ಲಿ ಜಾಲತಾಣದ ಪ್ರಕಟವಾಗುತ್ತಿರುವ ‘ಪಂಜು, ಉದಯೋನ್ಮುಖ ಬರಹಗಾರರಿಗೆ ಒಂದು ಉತ್ತಮ ವೇದಿಕೆಯಾಗಿದೆ! ಹಾಗೆಂದು ಗುಣಮಟ್ಟದಲ್ಲಿ ಯಾವುದೇ ರಾಜಿಗೂ, ಮುಲಾಜಿಗೂ ಒಳಪಡದೆ ಮುಂದುವರಿಯುತ್ತಿದೆ ಈ ಬ್ಲಾಗು. ಪಂಜು’ ಕನ್ನಡ ಜಾಲತಾಣದ ಒಂದು ಉತ್ತಮ ಬ್ಲಾಗ್ ಮ್ಯಾಗಜೀನ್. ಇದು ಇನ್ನೂ ವಿಸ್ತೃತವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
ಪ್ರೊ. ಎಸ್.ಜಿ.ಶಿವಶಂಕರ್

ಮಾನ್ಯರೇ,
‘ಪಂಜು’ ಅಂತರ್ಜಾಲ ತಾಣದಲ್ಲಿ ಪ್ರತಿವಾರವೂ ಮೂಡಿ ಬರುವ ವೈವಿಧ್ಯಮಯ ಬರಹಗಳ ಮೊದಲ ಓದುಗ ನಾನು. ಯಾವುದೇ ಇಸಂಗಳಿಗೆ ಮತ್ತು ರಾಜಕೀಯ ಪಕ್ಷಗಳ ಮುಲಾಜಿಗೆ ಒಳಗಾಗದೆ, ಶುದ್ಧ ಸಾಹಿತ್ಯ ಮತ್ತು ವಿಚಾರಪೂರ್ಣ ಬರಹಗಳನ್ನು ನೀಡುತ್ತಾ, ಹಿರಿಯರು ಜೊತೆಗೆ ಕಿರಿಯ ಬರಹಗಾರರನ್ನು ಪ್ರೋತ್ಸಾಹಿಸುವ ಪಂಜು ನನಗೆ ಅಚ್ಚು ಮೆಚ್ಚು.
ಕೃಷ್ಣಮೂರ್ತಿ ಎನ್.

“ಪಂಜು” ಹೊಸ ಬರಹಗಾರರ ಮೇಲೆ ಬೆಳಕು ಚೆಲ್ಲುತ್ತದೆ ಅಂದರೆ ಅದೆಷ್ಟೋ ಹೊಸ ಬರಹಗಾರರನ್ನ ಪರಿಚಯಿಸಿದೆ. ಅಂತವರಲ್ಲಿ ನಾನು ಒಬ್ಬಳು. ನನ್ನ ಕಾದಂಬರಿ, ಲೇಖನ ಹಾಗೂ ಕಥೆ ಪಂಜುವಿನಲ್ಲಿ ಪ್ರಕಟವಾಗಿದೆ. ಪ್ರತಿವಾರವು ಅತ್ಯಾಕರ್ಷಕ ಬರಹಗಳೊಂದಿಗೆ ಮೂಡಿ ಬರುವ “ಪಂಜು” ಪತ್ರಿಕೆ ನಿರಂತರವಾಗಿ ಜನಪ್ರೀಯತೆಯನ್ನು ಗಳಿಸುತ್ತಾ ಮುಂದೆ ಸಾಗುವುದರಲ್ಲಿ ಸಂಶಯವಿಲ್ಲ. ಕನ್ನಡದ ಓದುಗರು ಇಂತಹ ಅಂತರ್ಜಾಲ ಪತ್ರಿಕೆಗಳನ್ನು ಓದಿ ಪ್ರೋತ್ಸಾಹಿಸಬೇಕು.
ನಾಗರತ್ನಾ ಗೋವಿಂದನ್ನವರ.

ಪಂಜು ಪತ್ರಿಕೆಯು ಅತ್ಯುತ್ತಮ ಆನಲೈನ್ ಪತ್ರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಮುಕ್ತ ಅವಕಾಶ ಇದೆ… ಹೀಗಾಗಿ ಇದು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅರ್ಹವಾದ ಪತ್ರಿಕೆ ಎಂದು ನನ್ನ ಅನಿಸಿಕೆ
ಮುತ್ತು ಉಪ್ಪಿನ್

ಹೀಗೊಂದು ಅಂತರ್ಜಾಲ ಪತ್ರಿಕೆ ಇರುವ ವಿಷಯವೇ ತಿಳಿದಿಲ್ಲದ ನನಗೆ ಪಂಜು ಪತ್ರಿಕೆಯ ಸಂಪಾದಕ ನಟರಾಜು ಅವರ ಪರಿಚಯವೇ ಒಂದು ಆಕಸ್ಮಿಕ. ಅವರ ಪತ್ರಿಕೆಯ ಹೆಸರು ಕೇಳಿ ಕ್ರಾಂತಿಯ ಬಗ್ಗೆ ಇರಬಹುದು ಎಂದು ಅನಿಸಿತ್ತು. ಓದಿದ ಮೇಲೆ ತುಂಬ ಸುಲಭವಾಗಿ ಓದಲು ಸಿಗುವ, ಮೊಬೈಲ್ ನಲ್ಲೂ ಓದಬಹುದಾದಂತಹ ಒಂದು ಮನಮುಟ್ಟುವ ಪತ್ರಿಕೆಯ ಪರಿಚಯ ನನಗೆ ಬಹಳ ಸಂತೋಷ ತಂದಿತ್ತು. ಅದರಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ಬರಹಗಳು ಓದುಗರ ಮೇಲೆ ಪ್ರಭಾವ ಬೀರುವಂತಿದ್ದವು. ಹಾಗಾಗಿ ನಟರಾಜು ರವರಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸುತ್ತಿದ್ದೆ. ಅವರೊಮ್ಮೆ ನನ್ನನ್ನು ಬರೆಯಲು ಸೂಚಿಸಿದರು. ಎಂದು ಏನನ್ನು ಬರೆಯದಿದ್ದ ನನಗೆ ನನ್ನ ಬರವಣಿಗೆಯ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ. ಆದರೂ ಅವರ ಮಾತಿಗೆ ಹಾಗು ನನ್ನ ಗುರುಗಳಾದ ಉದಯಶಂಕರ ಪುರಾಣಿಕರ ಮಾತಿಗೆ ಮಣಿದು ಒಂದು ಕಥೆಯನ್ನು ಬರೆದು ಕಳುಹಿಸಿದೆ. ಅಲ್ಲಿಂದ ಮುಂದೆ ಇನ್ನು ಹೆಚ್ಚು ಹೆಚ್ಚು ಕಥೆಗಳನ್ನು ಬರೆಯುವ ಅವಕಾಶ ಮಾಡಿಕೊಟ್ಟರು ಹಾಗು ನನ್ನ ಬರವಣಿಗೆಯ ಮೇಲೆ ನನಗೆ ಆಸಕ್ತಿ ಬಂದಿತು. ಅಲ್ಲಿಂದ ಶುರುವಾಯಿತು ನನ್ನ ಹಾಗು ಪಂಜುವಿನ ಸ್ನೇಹ. ಪಂಜು ಓದುಗರಿಗೂ ಹಾಗು ಬರಹಗಾರರಿಗೂ ಒಂದು ಉತ್ತಮ ವೇದಿಕೆ ಎನ್ನುವುದು ನನ್ನ ಅಭಿಪ್ರಾಯ. ತಂತ್ರಜ್ಞಾನದ ಬಳಕೆಯನ್ನು ಚೆನ್ನಾಗಿ ಬಳಸಿಕೊಂಡು ಕನ್ನಡ ಭಾಷೆಯನ್ನೂ ಉಳಿಸಿ ಬೆಳೆಸುವ ಒಂದು ಒಳ್ಳೆಯ ಪ್ರಯತ್ನ. ಪಂಜು ಇನ್ನು ಹೆಚ್ಚುಓದುಗರನ್ನು ಪಡೆದುಕೊಳ್ಳಲಿ ಎಂದು ಆಶಿಸುತ್ತೇನೆ.
ಗಿರಿಜಾ ಜ್ಞಾನಸುಂದರ್

ಪಂಜು ಅಂತರ್ಜಾಲಪತ್ರಿಕೆಯನ್ನು ನಾನು ಆರಂಭದ ದಿನಗಳಿಂದಲೂ ಓದುತ್ತಾ ಇದ್ದೇನೆ. ಇದೊಂದು ಸಮಗ್ರ ವಾದ ಸಾಹಿತ್ಯದ ಪತ್ರಿಕೆ. ಇದರಲ್ಲಿ ಪ್ರಕಟವಾದ ಹಲವು ಲೇಖನಗಳನ್ನು ಕಾದಂಬರಿಗಳು ನಾನು ಡೌನ್ಲೋಡ್ ಮಾಡಿಕೊಂಡು ಸಂಗ್ರಹಿಸಿದ್ದೇನೆ.
ವಿಜಯೇಂದ್ರ

ಮನಸಿನ ತಳಮಳಕೆ ಪೂರ್ಣ ವಿರಾಮ ಪಂಜು. ಸಮಯದ ಅರಿವೇ ಇರುವುದಿಲ್ಲ ಪಂಜು ಓದುತ್ತಾ ಸಾಗುತ್ತಿದ್ದರೆ. ಏಕಾಂಗಿಗೆ ಸಂಗಾತಿಯಾಗಿ ನಲ್ಮೆಯ ಗೆಳೆಯನಾಗಿ ಪಂಜು ಮನೆ ಮನ ತುಂಬಿದೆ. ಎಂದೆಂದೂ ಸದಾ ಓದುಗರ ಕಣ್ಮಣಿ ಪಂಜು.
ಶಾರದ ನಾಗರಾಜ್

ಸಾಹಿತ್ಯ ಕ್ಷೇತ್ರದ ನಾಡಿ ಮಿಡಿತವನ್ನು ಅರಿತು ರೂಪಿಸಿದ ಪತ್ರಿಕೆ.ಇದು ಎಲೆಮರೆಯ ಕಾಯಿಯಂತಿರುವ ಉದಯೋನ್ಮುಖ ಬರಹಗಾರರಿಗೆ ತೆರೆದಿಟ್ಟ ಅವಕಾಶ. ಇದನ್ನು ಉತ್ತಮವಾಗಿ ಸಮಾಜಮುಖಿ ಹಾಗೂ ಜೀವಪರತೆಗಾಗಿ ಬಳಸಿಕೊಳ್ಳುವದು ಇಂದಿನ ಜರೂರತ್ತು. ಶುಭವಾಗಲಿ ಪಂಜು…
….ಬೀ

ಕೆಲ ವರ್ಷಗಳ ಹಿಂದೆ ಆನ್ಲೈನ್ ಪತ್ರಿಕೆಯಾಗಿ ಮೂಡಿಬಂದಿದ್ದ ಪಂಜು ಎಲ್ಲರಲ್ಲೂ ಮೂಡಿಸಿದ್ದ ನಿರೀಕ್ಷೆಗಳು ಬಹಳ. ಈ ನಿರೀಕ್ಷೆಗಳು ನಿಜವಾಗುವಂತೆ ಸತತವಾಗಿ ಒಳ್ಳೊಳ್ಳೆಯ ಕಂಟೆಂಟ್ ಗಳನ್ನು ಓದುಗರಿಗಾಗಿ ನೀಡುತ್ತಾ ಪಂಜು ದಾಪುಗಾಲಿಡುತ್ತಾ ಹೋಯಿತು. ಪಂಜುವಿಗೆ ಸಿಕ್ಕ ಲಕ್ಷಾನುಗಟ್ಟಲೆ ಹಿಟ್ಸ್ ಇದಕ್ಕೆ ಸಾಕ್ಷಿ. ನನ್ನನ್ನೂ ಸೇರಿದಂತೆ ಹಲವು ಹೊಸ ಬರಹಗಾರರನ್ನು ಪರಿಚಯಿಸಿದ ಪಂಜು ಹೊಸಬರ ಬರಹಗಳನ್ನು ನಿರಂತರವಾಗಿ ಪ್ರಕಟಿಸಿ ಉದಯೋನ್ಮುಖ ಬರಹಗಾರರಲ್ಲೊಂದು ಭರವಸೆಯನ್ನು ಮೂಡಿಸಿತು. ಪತ್ರಿಕೆಗಳಿಗೆ ಯುವಲೇಖಕರಿಂದಲೇ ಅಂಕಣಗಳೂ ಬಂದವು. ಇನ್ನು ಪ್ರಕಟಿತ ಕಂಟೆಂಟ್ ಗಳು ಬರಹಗಳಿಗಷ್ಟೇ ಸೀಮಿತವಾಗಿರದೆ ಕಥೆ, ಕವನ, ಅನುವಾದ, ವ್ಯಂಗ್ಯಚಿತ್ರಗಳನ್ನೂ ಪರಿಚಯಿಸಿ ಪತ್ರಿಕೆಯು ತನ್ನ ಸೀಮೆಯನ್ನು ನಿಧಾನವಾಗಿ ವಿಸ್ತರಿಸುತ್ತಾ ಹೋಯಿತು. ಕ್ರೈಂ ಸಂಬಂಧಿ ಬರಹಗಳನ್ನೂ, ಸರಣಿಗಳನ್ನೂ ಪ್ರಯತ್ನಿಸಿ ಯಶಸ್ವಿಯಾಗಿದ್ದು ಪಂಜುವಿನ ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸಿಗೆ ಸಾಕ್ಷಿ.
ಪಂಜುವಿನಿಂದ ಬರವಣಿಗೆಯ ಪಯಣವನ್ನು ಶುರುಮಾಡಿದ ಹಲವಾರು ಲೇಖಕರು ಇಂದು ಸಾಕಷ್ಟು ಬೆಳೆದಿದ್ದಾರೆ. ಪಂಜು ಪತ್ರಿಕೆಯೂ ಕೂಡ ನಿರಂತರವಾಗಿ, ಭರ್ಜರಿಯಾಗಿ ಮುಂದುವರಿದಿದೆ. ಓದುಗರು ಕಮ್ಮಿಯಾಗುತ್ತಿದ್ದಾರೆ ಎಂಬ ದೂರುಗಳ ನಡುವೆಯೂ ಪಂಜುವಿನ ಹಿಟ್ಸ್ ಗಳು ಮತ್ತು ಸಾಹಿತ್ಯವನ್ನು ಓದುಗರಿಗೆ ಕೊಡಮಾಡುತ್ತಿರುವ ಲೇಖಕರ ಸಂಖ್ಯೆಯು ಹೆಚ್ಚುತ್ತಲೇ ಸಾಗುತ್ತಿರುವುದು ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ. ಇನ್ನು ಪಂಜುವಿನಲ್ಲಿ ಪ್ರಕಟವಾಗುತ್ತಿದ್ದ ಹಲವು ಬರಹಗಳು, ಅಂಕಣಗಳು ಸಂಗ್ರಹಯೋಗ್ಯವೆನ್ನಿಸುವಷ್ಟು ಉತ್ಕøಷ್ಟ ಮಟ್ಟದವುಗಳಾಗಿದ್ದೂ ಸತ್ಯ. ಮುಂದೆಯೂ ಪಂಜುವಿನ ಈ ಯಶಸ್ಸಿನ ಪಯಣವು ಹೀಗೆಯೇ ಮುಂದುವರಿಯಲಿ ಎಂಬ ಶುಭಹಾರೈಕೆ ನನ್ನದು.
ಪ್ರಸಾದ್ ನಾಯ್ಕ್,

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x