ಎರಡು ಪತ್ರಗಳು: ಎಚ್.ಕೆ.ಶರತ್, ವಿನಯ.ಎ.ಎಸ್.


ಮಿತಿಯ ಪರಿಧಿಯೊಳಗೆ ಪ್ರೀತಿ

ಯಾವುದು ಪ್ರೀತಿ? ಹೊಸತನ್ನು ಅಪ್ಪುವುದೋ… ಹಳೆ ನಂಟು ಕಳಚುವುದೋ… ಕನಸುಗಳ ಗೂಡು ಕಟ್ಟುತ್ತ ವಾಸ್ತವದ ಎದೆಗೆ ಒದೆಯುವುದೋ…

ಯಾವುದು ಪ್ರೀತಿಯಲ್ಲ? ಮೋಹದ ಗಂಟು ಸುತ್ತಿಕೊಂಡ ಭಾವವೋ… ಟೈಂ ಪಾಸ್ ಎಂಬ ಕ್ಷುಲ್ಲಕ ಗ್ರಹಿಕೆಗೆ ಅಡಿಯಾಳಾದ ತೋರಿಕೆಯ ಸಂಬಂಧವೋ… ನಿಜದ ನೆಲೆ ಹುಡುಕುತ್ತ ಹೊರಟರೆ ಎಲ್ಲವೂ ಗೋಜಲು ಗೋಜಲು.

ವ್ಯವಸ್ಥೆ ನಿರ್ಮಿಸಿರುವ ಚೌಕಟ್ಟು ಮೀರಲು ಮುಂದಾಗುವ ಪ್ರೀತಿ ಹೊಸದೊಂದು ಬಿಕ್ಕಟ್ಟಿಗೆ ಮುನ್ನುಡಿ ಬರೆಯುತ್ತದೆ. ಚೌಕಟ್ಟುಗಳ ಮಿತಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ?

ಜಾತಿ, ಅಂತಸ್ತು, ವಯಸ್ಸು, ವಾಸ್ತವದ ಹಂಗು ತೊರೆದು ಭಾವನಾತ್ಮಕ ಆಸರೆಗೆ ಹಂಬಲಿಸುವ ಮನ, ಸಮಾಜ ನಿರ್ಮಿಸಿರುವ ಕಟ್ಟು ಪಾಡುಗಳ ಗಡಿರೇಖೆ ದಾಟುತ್ತದೆ. ಮನಸು ಪ್ರೀತಿಯ ಹೊಸ ಕನಸಿನ ಬೆನ್ನೇರಿ ಹೊರಡುತ್ತದೆ.

ಅವನು ಅವಳ ಪ್ರಪಂಚವಾಗಿ ಬಿಡುತ್ತಾನೆ. ಅವಳು ಅವನ ಭಾವನೆಗಳನ್ನು ಅಟ್ಟಕ್ಕೇರಿಸುತ್ತಾಳೆ. ಇಬ್ಬರೂ ಸೇರಿ ನಿರ್ಜೀವ ಆಚಾರಗಳಿಗೆ ಚಟ್ಟ ಕಟ್ಟುತ್ತಾರೆ. ಕನಸುಗಳ ಜಾತ್ರೆಯಲಿ ಅಲೆಯುತ್ತಾರೆ, ಅವಾಸ್ತವದ ತೀರದಲ್ಲಿ ಕೂತು ಭವಿಷ್ಯದ ಕಥೆ ಹೆಣೆಯುತ್ತಾರೆ.

ಸಮಾಜ ಕೈಲಾಗದ ಹೇಡಿಯಲ್ಲ. ‘ಅಹಂ’ ಅದರ ಆಸ್ತಿ. ತನ್ನ ನಂಬಿಕೆಗಳಿಗೆ ಘಾಸಿಯಾದರೆ ಅದು ಸುಮ್ಮನಿರುವುದಿಲ್ಲ. ತನ್ನ ಬತ್ತಳಿಕೆಯಲ್ಲಿ ಸದಾ ಕಾಲ ಮಾತಿನ ಶಸ್ತ್ರಾಸ್ತ್ರಗಳನ್ನು ಅದು ಶೇಖರಿಸಿ ಇಟ್ಟುಕೊಂಡಿರುತ್ತದೆ.

ಆ ಮನೆಯ ಅವಳು ಈ ಮನೆಯ ಇವನೊಟ್ಟಿಗೆ ಸುತ್ತುತ್ತಿದ್ದಾಳಂತೆ… ಅವಳದ್ದು ಆ ಜಾತಿ, ಇವನದ್ದು ಈ ಜಾತಿ… ಅವಳಿಗೇನು ಬಂದಿತ್ತು ಕೇಡುಗಾಲ, ಇವನಿಗೇನಾಗಿತ್ತು? ಅವಳನ್ನು ಬಿಟ್ಟರೆ ಜಗತ್ತಿನಲ್ಲಿ ಮತ್ಯಾರೂ ಇರಲಿಲ್ವ… ಅವಳು ಅವನೊಟ್ಟಿಗೆ ಓಡಿ ಹೋದ್ಲಂತೆ…

ಸಮಾಜದ ಕೆಂಗಣ್ಣಿಗೆ ಗುರಿಯಾಗುವ ‘ಕ್ರಾಂತಿಕಾರಿ ಪ್ರೇಮಿ’ಗಳ ಕುಟುಂಬ ಕುಸಿದು ಬೀಳುತ್ತದೆ. ತನ್ನಲ್ಲಿಯೇ ಹತ್ತು ಹಲವು ಹುಳುಕಿದ್ದರೂ ಅದರೆಡೆಗೆ ಜಾಣ ಕುರುಡು ಪ್ರದರ್ಶಿಸುವ ಸಮಾಜ ಆ ಕುಟುಂಬ ಸದಸ್ಯರನ್ನು ಹಂಗಿಸುವುದನ್ನೇ ತನ್ನ ಕಸುಬು ಮಾಡಿಕೊಂಡು ಬಿಡುತ್ತದೆ.

ಈ ಎಲ್ಲ ಅಪಸವ್ಯಗಳ ನಡುವೆಯೇ ‘ಕ್ರಾಂತಿಕಾರಿ ಪ್ರೇಮಿ’ಗಳು ತಮ್ಮ ಸಾಹಸ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ. ಹೆತ್ತವರನ್ನು ತೊರೆದು ಓಡಿ ಹೋಗುತ್ತಾರೆ. ಯಾವುದೋ ದೇವಸ್ಥಾನದಲ್ಲೋ ಪೊಲೀಸ್ ಠಾಣೆಯಲ್ಲೋ ಸತಿ ಪತಿಗಳಾಗುತ್ತಾರೆ. ಆಮೇಲಿನದ್ದು ಅವರವರ ಪಾಲಿಗೆ ಒಲಿದ ಬದುಕು.

ಇಷ್ಟೆಲ್ಲ ರಾದ್ಧಾಂತ ಬೇಕಾ? ಬೇಡವೆನ್ನುವುದಾದರೆ ಸೋಲಬೇಕಿರುವುದು ಯಾರು? ಪ್ರೇಮಿಗಳಾ? ಹೌದು ಅನ್ನುವುದಾದರೆ, ಪ್ರೀತಿಸುವುದು ತಪ್ಪಾ? ತಪ್ಪಲ್ಲ ಎಂಬ ನಿಲುವಿಗೆ ತಲೆಬಾಗುವುದಾದರೆ ಪರಸ್ಪರ ಪ್ರೀತಿಸಿದವರು ಕೂಡಿ ಬಾಳಲು ಮುಕ್ತ ವಾತಾವರಣ ನಿರ್ಮಿಸಬಹುದಲ್ಲವೇ?

ಜಾತಿ, ಧರ್ಮದ ಜಪ ಮಾಡುತ್ತ ಮನಸ್ಸಿನ ನೆಮ್ಮದಿಗೆ ಬರೆ ಎಳೆದುಕೊಳ್ಳುವುದು ಸರಿಯೇ? ನಿನ್ನೆ ಮೊನ್ನೆ ಸಿಕ್ಕ ಅವನಿ(ಳಿ)ಗೋಸ್ಕರ ಇಷ್ಟು ದಿನ ಸಾಕಿ ಸಲಹಿದವರ ನಂಟು ಕಡಿದುಕೊಳ್ಳಬಹುದೇ?

ಯಾವುದು ತಪ್ಪು, ಯಾವುದು ಸರಿ ಎಂಬ ಪ್ರಶ್ನೆಗೆ ಎಲ್ಲರೂ ಅವರೊಳಗೆ ಉತ್ತರ ಕಂಡುಕೊಳ್ಳಬೇಕಿದೆ.

-ಎಚ್.ಕೆ.ಶರತ್,

 


ಹೀಗೊಂದು ಆಸ್ಪತ್ರೆಯ ಮಾತು

ನೋವು ಹೆಚ್ಚಾಗಿ, ಇನ್ನೇನು ಸಹಿಸಲಾರೆ …….  ಎನ್ನುವಾಗ ಆಸ್ಪತ್ರೆಗೆ ಧಾವಿಸುವ ಜನರ ತಾಳ್ಮೆ ಮನೆಯಲ್ಲಿಯೇ ಮುಗಿದುಹೋಗಿರುತ್ತದೆ. ನಿಮಗೇನಾಗಿದೆ ಅಂದರೆ ''ಬೇಗ ನೋಡಿ, ಹೋಗಬೇಕು'' ಎಂದೋ,''ನಮಗೆ ಗೊತ್ತಿದ್ರೆ ನೀವ್ಯಾಕೆ ಬೇಕಿತ್ತು''ಎಂದೋ ಉತ್ತರಿಸುವ ಮನೆಯವರ ಅಸಹನೆ ಅಸದಳ, ಡಾಕ್ಟರ್ ಎಂದರೆ ಹಣ ಕೀಳುತ್ತಾರೆ ಎನ್ನುವ ಮನೋಭಾವವನ್ನ ಮನಸಲ್ಲಿ ಇರಿಸಿಕೊಂಡೇ ಬಂದವರಿಗೆ, ಟೆಸ್ಟ್ ಬರೆದ ಕ್ಷಣ ಅಸಾದ್ಯ ಕೋಪ. ನೋವಲ್ಲಿರುವವರಿಗೆ ನಮ್ಮ ನಗು ಮೊಗದ ಸೇವೆ ನಿರಂತರ.

ಮಧುಮೇಹದ ಕಾಲಿನ ತೊಂದರೆಗಳಿಗೆ ಉಚಿತ ಪರೀಕ್ಷೆ ಮಾಡುವಾಗ, ಉಚಿತ ರಕ್ತ ಪರೀಕ್ಷೆ ಮಾಡುವಾಗಲೂ, ನಾಳೆ ಹಣ ಕಟ್ಟಿ ಪುನಹ ತೋರಿಸಬೇಕಪ್ಪಾ ಎಂದು ಮಾತಾಡಿಕೊಂಡು ಹೋಗುವ ಜನರನ್ನ ನೋಡುತ್ತೇನೆ. ಮೊದಲಿಗೆ ಬೇಕಾಗಿರುವುದು ನಂಬಿಕೆ, ಕಾಯಿಲೆ ಏನೆಂದು ಕಂಡುಹಿಡಿದು ಚಿಕಿತ್ಸೆ ಕೊಡಬೇಕಾದ್ದು  ನಮ್ಮ ಕರ್ತವ್ಯ, ನೋಡಿದ ತಕ್ಷಣ ಮಶೀನಿನ ಒಳಗೆ ಏನಾಗಿದೆ ಎಂದು ತಿಳಿಯದಿರುವಾಗ, ಇಡೀ ದಿನ ಕೆಲಸದಲ್ಲಿರುವ ದೇಹದ ಅoಗಾಗ  ಏನಾಗಿದೆ ಎಂದು ಪರೀಕ್ಷಿಸಬಾರದೇ ?

ನಾನಿಲ್ಲಿ ನೋಡಿ ಪರೀಕ್ಷಿಸಿ ಔಷಧಿ ಕೊಟ್ಟ ಒಂದೇ ಗಂಟೆ ಒಳಗೆ, ನನ್ನ ಬೇರೆ ಆಸ್ಪತ್ರೆಯ ಸಹ ವೈದ್ಯರ  ಕರೆ, ನೀವು ಈಗಷ್ಟೇ ನೋಡಿದವರು  ಬಂದಿದ್ದಾರೆ ಏನು ಮಾಡಲಿ ಎಂದು ? ಅವರನ್ನೇ ಕೇಳಿ ಎನ್ನುವುದೇ ಉತ್ತರ, ಏಕೆಂದರೆ ಮತ್ತೊಂದು ಗಂಟೆ ಕಳೆದು ಯಾವ ಆಸ್ಪತ್ರೆಗೆ ಹೋಗುತ್ತಾರೋ?

ಕಾಲ ಕೆಟ್ಟಿದೆ ಎಲ್ಲೆಡೆಯೂ ಸುಳ್ಳು ಮೋಸ ನಡೆಯುತ್ತಿದೆ ಎಂಬುವುದು ನಿಜ, ಆದರೆ ಸೇವಾ ಮನೋಭಾವ, ಮಾನವೀಯತೆ ಮೆರೆವ ನೂರಾರು ವೈದ್ಯರನ್ನು, ಆರೋಗ್ಯ ತಪಾಸಕರನ್ನು ನಾನು ಬಲ್ಲೆ , ಎಲ್ಲರೂ  ಉಚಿತ ಸೇವೆ ಮಾಡಿದರೆ ಜೇವನೋಪಾಯವೇನು ?ಅದಕ್ಕೂ ಒಂದು ಮಿತಿಯಿದೆ, ಆ ಮಿತಿಯಲ್ಲಿ ಎಲ್ಲರೂ ಸೇವೆ ಮಾಡುತ್ತಾರೆ. ಬೇರೆಲ್ಲಾ ಸೇವೆಗಳಲ್ಲಿ ಬಡವರಿಗೆ ಇಡೀ ರೀತಿ ಉಚಿತ ಸಹಾಯ ನಡೆಯುತ್ತಿದೆಯೇ ?

ಹಳೆಯ ಕಾಲದಂತಿರದೇ ಈಗ ಹೊಸ ಚಿಕಿತ್ಸೆ, ಹೊಸ ಪರೀಕ್ಷೆಗಳು ಬಂದಿವೆ, ವಿಜ್ಞಾನದ ಹೊಸ ಅವಿಷ್ಕರಣಗಳು ಹಣ ಜಾಸ್ತಿ ಯಾದ ಚಿಕಿತ್ಸೆಯನ್ನು ಸೂಚಿಸಿದರೆ, ಅದನ್ನು ಮಾಡಲೇಬೇಕು, ವಿದೇಶದoತೆ ಸರಕಾರವೇ ಎಲ್ಲದಕ್ಕೂ ಹಣ ಕೊಡುವ ವ್ಯವಸ್ಥೆ ಆಗುವವರೆಗೂ ತಾಳ್ಮೆಯಿಂದ ಕಾಯ ಬೇಕಾಗಿರುವ ಪರಿಸ್ತಿತಿ  ನಿರ್ಮಾಣವಾಗಿದೆ .

ದೇಶದ ಆಸ್ಪತ್ರೆಗಳು ಅತ್ಯಂತ ಕಷ್ಟಕರವಾದ ಚಿಕಿತ್ಸೆ ಯನ್ನು ಕೊಡಬಲ್ಲದು ಎನ್ನುವುದು ಹೆಮ್ಮೆಯ ವಿಷಯ .

-ವಿನಯ.ಎ.ಎಸ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
sharada moleyar
sharada moleyar
10 years ago

ಯಾವುದು ತಪ್ಪು, ಯಾವುದು ಸರಿ ಎಂಬ ಪ್ರಶ್ನೆಗೆ ಎಲ್ಲರೂ ಅವರೊಳಗೆ ಉತ್ತರ ಕಂಡುಕೊಳ್ಳಬೇಕಿದೆ.
we r only responsible 4 our good or bad.loving a girl is not mistake but leading a good life is required..
ಎಚ್.ಕೆ.ಶರತ್,
ನೋವಲ್ಲಿರುವವರಿಗೆ ನಮ್ಮ ನಗು ಮೊಗದ ಸೇವೆ ನಿರಂತರ.
continue it..Vinaya  .a.s.

Utham Danihalli
10 years ago

Ebara barahavu estavaythu shubhavagali

2
0
Would love your thoughts, please comment.x
()
x