ಇಂದಿನ ಮಕ್ಕಳು ನಾಳಿನ ನಾಡ ಬೆಳಗುವ ನಾಯಕರು. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ಶಾಲೆಯಲ್ಲಿ ಗುರುಗಳು ಮನೆಯಲ್ಲಿ ಪಾಲಕರು ಮಕ್ಕಳ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಹುಟ್ಟಿದ ಪ್ರತಿಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವನನ್ನು ಭಾವಿಭವಿಷ್ಯತ್ತಿಗೆ ಅಣಿಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಮಗ/ಳು ಶಾಲೆಗೆ ಹೋಗತಾರೆ ಅಂದರೆ ಅವರ ಬಗ್ಗೆ ಪಾಲಕರ ಕಾಳಜಿ ಬೇಕೆಬೇಕು. ತಯಾರಿ ಮಾಡಿ ಶಾಲೆಗೆ ಕಳಿಸಿದರೆ ಜವಾಬ್ದಾರಿ ಮುಗಿತು ಅವರ ಕೇಳಿದ್ದೆಲ್ಲ ಕೊಡಿಸಿದರೆ ಆಯ್ತಲ್ಲವಾ ಅನ್ನಬೇಡಿ. ನಿಮ್ಮ ಮಗು ನಿಮ್ಮ ಜವಾಬ್ದಾರಿ ಎನ್ನುವದು ನೆನಪಿರಲಿ. ಶಾಲೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುತ್ತಾರೆ. ಅವರನ್ನು ಓದಿಸುವ ಅರ್ಥಾತ ಹೋಮವರ್ಕ ಮಾಡಿಸುವ ಹಾಗೂ ಇಡೀದಿನ ಶಾಲೆಯಲ್ಲಿ ಮಗ/ಳು ಏನು ಮಾಡಿದಳು/ನು ಎನ್ನುವ ಪರಿವೆಯಿಂದ ಅಂದಿನ ಕ್ಲಾಸವರ್ಕ ಚೆಕ್ ಮಾಡಿರಿ. ಏನು ತಿಳಿದುಕೊಂಡಿದ್ದಾರೆ, ಹೇಗಿದ್ದಾರೆ ಎನ್ನುವ ವಿಷಯ ತಿಳಿಯುತ್ತದೆ.
ಯಾವ ವಿಷಯಗಳಲಿ ವೀಕ ಇದ್ದಾರೆ ಯಾವದು ಆಸಕ್ತಿದಾಯಕ ವಿಷಯ ಎಂಬುದನ್ನು ಪಾಲಕರು ಗುರ್ತಿಸಬೇಕು. ವೀಕ ಇದ್ದ ವಿಷಯಗಳಿಗೆ ಹೆಚ್ಚಿನ ಗಮನ ಕೊಡಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಮಕ್ಕಳು ಕಲಿಯುವ ಶಾಲೆಗೆ ಪೋಷಕರು ಆಗಾಗ ಭೆಟ್ಟಿ ಕೊಡಬೇಕು. ಕ್ಲಾಸ ಟೀಚರ ಹತ್ತಿರ ಭೆಟ್ಟಿಮಾಡಿ ಅವರ ಸಂಪೂರ್ಣ ಮಾಹಿತಿ ತಿಳಿಯಬೇಕು. ಸರಿಯಾಗಿ ದಿನಂಪ್ರತಿ ಶಾಲೆಗೆ ಬರ್ತಾನೋ ಇಲ್ಲವೋ, ಇಡೀದಿನ ಕ್ಲಾಸಲಿ ಇರ್ತಾನೋ ಇಲ್ಲವೋ ಸರಿಯಾಗಿ ಓದ್ತಾನೋ ಇಲ್ಲವೋ ಎಂಬಿತ್ಯಾದಿ ವಿಷಯಗಳು ಪಾಲಕರ ಗಮನಕ್ಕೆ ಬರುತ್ತವೆ. ಶಾಲೆಯಲ್ಲಿ ಕರೆದ ಪಾಲಕರ ಸಭೆ ಹಾಗೂ ತಾಯಂದಿರ ಸಭೆಗೆ ಹಾಜರಾಗಿ ಮಕ್ಕಳ ಪ್ರಗತಿಯ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಿ. ಶಾಲೆಯೊಡನೆ ಪಾಲಕರ ಒಡನಾಟ ಇದ್ದರೆ ಮಕ್ಕಳಿಗೂ ಖುಷಿಯೊಂದಿಗೆ ಭಯವೂ ಇರುತ್ತೆ. ಸುಳ್ಳು ಹೇಳುವ ಅವಕಾಶವೇ ಮಕ್ಕಳಿಗೆ ಬರಲ್ಲ. ಶಿಕ್ಷಕರು ಮನೆಗೆ ಭೆಟ್ಟಿಕೊಟ್ಟಾಗ ಮಕ್ಕಳ ಬಗ್ಗೆ ಸರಿಯಾದ ಚಿತ್ರಣ ನೀಡಿ ಮುಚ್ಚು ಮರೆ ಬೇಡವೇ ಬೇಡ. ಅತಿಯಾದ ಪ್ರೀತಿ ಒಳ್ಳೆಯದಲ್ಲ ಅತಿಯಾದ ದಂಡನೆ, ನಿಂದನೆ ಕೂಡ ತರವಲ್ಲ. ಇಂದಿನ ಮಕ್ಕಳು ತುಂಬಾ ಫಾಷ್ಟ ಅಷ್ಟೇ ಸೂಕ್ಷ್ಮ ಕೂಡ. ಆದ್ದರಿಂದ ತುಂಬಾ ಬ್ಯಾಲೆನ್ಸ ಮಾಡಿ ಸಯಯೋಜಿತವಾಗಿ ನಿಭಾಯಿಸಬೇಕಿದೆ.
ವರ್ಷವಿಡೀ ಓದಿದರೂ ಆತಂಕ ಮಾತ್ರ ಇದ್ದೆಇರುತ್ತದೆ. ಆತಂಕ, ಖಿನ್ನತೆ ದೂರ ಮಾಡಲು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವದು ಒಳ್ಳೆಯದು. ಈಗ ಶಾಲೆಯಲ್ಲಿಯೂ ಇವುಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ನಿಯಮಿತವಾದ ಓದು, ನಿಯಮಿತವಾದ ವ್ಯಾಯಾಮ ಹಾಗೂ ಸ್ವಯಂ ಶಿಸ್ತು ಮಕ್ಕಳನ್ನು ಕಲಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಪ್ರೋಟಿನಯುಕ್ತ ಆಹಾರ ಕೂಡ ಮಕ್ಕಳ ಆರೋಗ್ಯಕ್ಕೆ ಹಿತವಾಗಿರುತ್ತದೆ. ರಾತ್ರಿ ಲಘು ಆಹಾರ ನೀಡುವದರಿಂದ ಓದಲು ಅನುಕೂಲವಾಗುತ್ತದೆ.
ಸುಸ್ತು, ಆಯಾಸ ತಡೆಯುತ್ತದೆ.
ಓದು ಬೇಜಾರಾದಾಗ ಸ್ವಲ್ಪ ಲಘು ಮನರಂಜನೆ ಸಾಕು. ಮತ್ತೆ ಮನಸ್ಸು ಶಾಂತವಾಗಿ ಓದಿನೆಡೆ ಪ್ರೇರಿತವಾಗುತ್ತದೆ. ವಿಷಯಗಳ ಬದಲಾವಣೆಯೇ ವಿಶ್ರಾಂತಿ ಅಂತ ನಮ್ಮ ಗಾಂಧೀ ತಾತ ಹೇಳಿದ್ದಾರೆ. ಸರಳ ವಿಷಯದಿಂದ ಕಠಿಣ ವಿಷಯದೆಡೆಗೆ ಸಾಗಿದರೆ ಬೇಜಾರ ಬರಲ್ಲ. ನಡುವೆ ಟೀ, ಕಾಫಿಗಳು ಬೇಡ. ಓದುವಾಗ ಮನಸ್ಸು ಹಗುರವಾಗಿದ್ದು ಏಕಾಗ್ರತೆ ಇದ್ದರೆ ಸಾಕು. ಓದಿದ್ದೆಲ್ಲ ಮರೆತರೆ ಎಂಬ ಗಿಲ್ಟ ಬೇಡವೆ ಬೇಡ. ಪರೀಕ್ಷೆ ಎಂದರೆ ಒಂದು ಪಿಕನಿಕ್ ಅಂತ ಎದುರಿಸಿ ಹಬ್ಬದಂತೆ ಖುಷಿಪಡಿ. ಆಗ ನೋಡಿ ಆತಂಕವೇ ಇರಲ್ಲ.
ಟಿವಿ, ಮೊಬೈಲ ಬಳಕೆ ತುಂಬಾ ಕಡಿಮೆ ಮಾಡಿ. ಮಕ್ಕಳೆ ಚಿನ್ನದಂತ ಬದುಕಿನ ಚಿಣ್ಣರು ನೀವು. ಖುಷಿ ಜೀವನದ ಹರವನ್ನು ಹೆಚ್ಚಿಸುತ್ತದೆ. ಆತಂಕ ಬದುಕಿನ ಅದಮ್ಯ ಖುಷಿಯನ್ನ ನುಂಗಿಹಾಕುತ್ತದೆ. ಆರಾಮಾಗಿರಿ ಯಾರ ಮಾತಿಗೂ ಭಯಬೀಳದಿರಿ. ಪರೀಕ್ಷಾ ಹಾಲಿನಲಿ ನೀಟಾಗಿ ಕೂತು ಪ್ರಶ್ನೇ ಪತ್ರಿಕೆ ಕೂಲಂಕುಷವಾಗಿ ಮೊದಲು ಓದಿ ನಂತರ ಬರೆಯಲು ಪ್ರಾರಂಬಿಸಿ. ಭಯ ನಿಮ್ಮನ್ನ ನೋಡಿ ಹೆದರಲಿ ವಿನಃ ನೀವೂ ಹೆದರಬೇಡಿ.
ನಾನು ಸರಿಯಾಗಿ ಓದಿಲ್ಲ ಪರೀಕ್ಷೆಯಲಿ ಫೇಲಾದರೆ ಅಂತ ಆತಂಕದಿಂದ ಮೊನ್ನೆ ಮೊನ್ನೆ ಒಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಹೀಗಾದರೆ ಪಾಲಕರ ಗತಿಯೇನು? ಅವರ ಹೆತ್ತೊಡಲ ಸ್ಥಿತಿಯೇನು? ಪರೀಕ್ಷೆಯಲಿ ಫೇಲಾದರೆ ಮತ್ತೇ ಬರೆದು ಪಾಸಾಗಬಹುದು. ಜೀವವನ್ನೆ ಕಳೆದುಕೊಂಡರೆ ಮರಳಿ ತರಬಹುದೇ? ಇಲ್ಲ ತಾನೆ. ಹಾಗಾದರೆ ಸದೃಡ ಮನಸ್ಸನ್ನು ಹೊಂದಿ ಸದೃಡವಾಗಿರಿ. ಹೆತ್ತವರಿಗೆ ಅಮೂಲ್ಯ ಆಸ್ತಿ ನೀವು. ನೀವೇ ಹೀಗೆ ಬದುಕಿಗೆ ವಿಮುಖರಾದರೆ ಹೇಗೆ. ಬದುಕು ದೇವರು ಕೊಟ್ಟ ಕಾಣಿಕೆ. ಅದನ್ನು ಸುಂದರವಾಗಿಸಿಕೊಳ್ಳಿ ಸಫಲವಾಗಿಸಿಕೊಳ್ಳಿ ಅದು ನಿಮ್ಮ ಕೈಲಿದೆ. ಜೊತೆಗೆ ಹೆತ್ತವರ ಮಾರ್ಗದರ್ಶನ ಇದ್ದೆ ಇರುತ್ತೆ. ಸದಾ ಬೆಂಗಾವಲಾಗಿರ್ತಾರೆ. ಇಂಥ ಅಮೂಲ್ಯ ಜೀವನ ಬದುಕಿರಿ. ನಿಮ್ಮನ್ನ ನಂಬಿದವರಿಗೆ ಬೆಳಕಾಗಿರಿ. ಜೀವನದ ಯಶಸ್ಸಿನ ಏಣಿ ಏರಿರಿ. ಮತ್ತೊಬ್ಬರಿಗೆ ಮಾದರಿಯಾಗಿರಿ. ಪರೀಕ್ಷೆಯನ್ನ ಚನ್ನಾಗಿ ಬರಿತಿರಲ್ಲವಾ. ಗುಡಲಕ್ ಮಕ್ಕಳೆ.
-ಜಯಶ್ರೀ ಭ. ಭಂಡಾರಿ.