ಯುವ ಜನತೆಗೆ ವಿವೇಕಾನಂದರ ಆದರ್ಶಗಳು: ವೈ. ಬಿ. ಕಡಕೋಳ

ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ  ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 “ರಾಷ್ಟ್ರೀಯ ಯುವ ದಿನ”ವೆಂದು 1984 ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ.

ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು.

ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ ತಾಯಿ ಭುವನೇಶ್ವರಿ ದೇವಿ. 1863 ಜನೇವರಿ 12 ರಂದು ಕಲಕತ್ತೆಯಲ್ಲಿ ಜನನ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಹೆಸರು ಪಡೆದರು. ಇವರು ಕಲಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅದ್ಯಯನ ಮಾಡಿದರು.

ವಿವೇಕಾನಂದರು ಪ್ರಪಂಚದಾದ್ಯಂತ ಪರ್ಯಟನೆ ಮಾಡಿ ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳು ನಾಲ್ಕು ಪುಸ್ತಕಗಳಲ್ಲಿ ಪ್ರಕಟಗೊಂಡಿದ್ದು. ಅವುಗಳಲ್ಲಿ ಅವರು ಯುವಜನತೆಗೆ ನೀಡಿದ ಆದರ್ಶಗಳನ್ನು ನಾವಿಂದು ನೆನೆಯುವ ಜೊತೆಗೆ ಪ್ರತಿದಿನ ಅವುಗಳನ್ನು ಅಳವಡಿಸಿಕೊಂಡಿದ್ದಾದರೆ ಬದುಕು ಸಾರ್ಥಕ.

ಯೌವನವು ಒಂದು ಪರಮಾದ್ಬುತ ಸ್ಥಿತಿ. ಈ ಯೌವನ ಎಂಬ ಪದದಲ್ಲಿ ಏನಿದೆ. ಏನಿಲ್ಲ. ? ಶಕ್ತಿ, ಬಲ. ತೇಜಸ್ಸು, ಹುಮ್ಮಸ್ಸು, ಸಾಹಸ, ರಭಸ, ಭರವಸೆ ಎಲ್ಲವೂ ಇದೆ. ಆದರೆ ಒಂದನ್ನು ಬಿಟ್ಟು, ಅದು ತಾಳ್ಮೆ, ವಿವೇಕ, ಅಂತಹ ಎಲ್ಲ ಯುವಶಕ್ತಿಯ ಎಲ್ಲ ಗುಣಗಳ ಜೊತೆಗೆ ವಿವೇಕ ಹೊಂದಿ ಆನಂದಭರಿತರಾಗಿ ಯೋಗಿಯಾಗಿ ಬಾಳಿದವರು ವಿವೇಕಾನಂದರು. ಅಂದು ಅವರು ನುಡಿದ ಮಾತುಗಳು ಇಂದಿಗೂ ಪ್ರಸ್ತುತ. ಹಾಗಾದರೆ ಕೆಲವು ಅವರ ನುಡಿಗಳನ್ನು ಮತ್ತೊಮ್ಮೆ ನೆನೆಯೋಣವಲ್ಲವೇ. ?

1) ನಮ್ಮ ಪ್ರಥಮ ಕರ್ತವ್ಯವೇ ನಮ್ಮಲ್ಲಿ ಆತ್ಮನಿಂದನೆ ಇರಕೂಡದು. ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು.

2)ನಾವು ಯಾವುದಕ್ಕೆ ಯೋಗ್ಯರೋ ನಮಗೆ ಆ ಸ್ಥಳ ದೊರಕುತ್ತದೆ. ಪ್ರತಿಯೊಂದು ಗುಂಡಿಗೂ ಒಂದು ಗುರಿಯಿದ್ದಂತೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅವಶ್ಯಕ. ಯಾವುದೇ ಗುರಿ ತಲುಪಬೇಕಾದರೆ ನಮ್ಮ ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು. ಮುಂದೆ ಗುರಿಯ ಕಡೆಗೆ ಸಾಗುವ ಪ್ರಯತ್ನವಿರಬೇಕು. ಆ ಗುರಿ ಒಳ್ಳೆಯದಾಗಿರಬೇಕು ಹೊರತು ಮತ್ತೊಬ್ಬರಿಗೆ ಕೇಡನ್ನು ಬಗೆಯುವಂತಾಗಿರಬಾರದು.

3)ನಾವು ಏನನ್ನು ಮಾಡುವುದಿಲ್ಲ. ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ. ಇದು ನಮ್ಮ ಯುವಜನಾಂಗದ ಅಶಾಂತಿಗೆ ಕಾರಣ. ಅದನ್ನು ಬಿಡಿ ಎಲ್ಲರಿಗೂ ಅವಕಾಶವಿರಲಿ ಎಂಬ ಮನೋಭಾವ ತಾಳಿರಿ.

4)ಯುವಕರೇ ಓರ್ವ ಹಗಲು ರಾತ್ರಿ, “ಅಯ್ಯೋ ನಾನು ದು:ಖಿ, ದೀನ. ಯಾವುದಕ್ಕೂ ಪ್ರಯೋಜನವಿಲ್ಲ”ಎಂದು ಭಾವಿಸುತ್ತಿದ್ದರೆ ಅವನು ನಿಷ್ಪ್ರಯೋಜಕನಾಗುತ್ತಾನೆ. ನಾವೇ ಎಲ್ಲವನ್ನೂ ಏನನ್ನು ಬೇಕಾದರೂ ಮಾಡಲುಸಿದ್ದ. ಏನನ್ನೂ ಬೇಕಾದರೂ ಸಾಧಿಸಿಯೇ ತೀರುವೆವು ಎಂಬ ದೃಢ ವಿಶ್ವಾಸ ನಿಮ್ಮಲ್ಲಿ ಬೆಳೆಯಲಿ.

5)ತಾಯಿಯನ್ನು ಪೂಜಿಸದ ಪಾಪಿ ಯಾವನೊಬ್ಬನೂ ಕೀರ್ತಿವಂತನಾಗಿಲ್ಲ ಭರತಖಂಡದಲ್ಲಿ ಪೂಜ್ಯತಮಳಾದ ಮಾತೆಗೇ ಅಗ್ರಸ್ಥಾನ ದೊರೆತಿದೆ. ಮಾತೆಯೇ ದೇವರು ಎಂಬ ತಿಳುವಳಿಕೆ ಹೊಂದಿ.

6)ನಮಗೆ ಬೇಕಾಗಿರುವುದು ನಿಯಮದಲ್ಲಿ ನಾವು ನಿಯಮಾತೀತರಾಗಬೇಕು, ನಾವು ನಿಯಮಾತೀತರು ಎಂಬುದರ ಮೇಲೆ ಮಾನವ ಕೋಟಿಯ ಇತಿಹಾಸವೆಲ್ಲ ನಿಂತಿದೆ.

7)ವ್ಯಕ್ತಿಯಾಗಲಿ, ಜನಾಂಗವಾಗಲೀ, ಮತ್ತೊಬ್ಬರಿಂದ ಪ್ರತ್ಯೇಕವಾಗಿ ಬಹಳ ಕಾಲ ಬಾಳಲಾರದು. ಎಲ್ಲರೂ ಸುಖವಾಗಿರುವತನಕ ಯಾರೂ ಸುಖವಾಗಿರಲಾರರು. ಆದ್ದರಿಂದ ನಾವೆಲ್ಲ ಒಂದೇ ಎಂಬ ಐಕ್ಯಮಂತ್ರವನ್ನು ಹೇಳಿರಿ. ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೀತಿಯೇ ಜೀವನ, ದ್ವೇಷವೇ ಮರಣ”ಎಂಬುದನ್ನು ಅರಿಯಿರಿ.

8)ಏಳಿರಿ, ಕಾರ್ಯೋನ್ಮುಖರಾಗಿರಿ ಈ ಬದುಕಾದರೂ ಎಷ್ಟು ದಿನ, ಮಾನವರಾಗಿ ಹುಟ್ಟಿದ ಮೇಲೆ ಎನನ್ನಾದರೂ ಸಾಧಿಸಿ.

9)ಜೀವನವೊಂದು ಗರಡಿಮನೆ, ಇಲ್ಲಿ ಬಲಿಷ್ಠರಾಗಲು ಬಂದಿದ್ದೇವೆ.

10)ಮನದೊಳಗಿನ ಪುಸ್ತಕ ತೆರೆಯದ ಹೊರತು ಎಷ್ಟು ಪುಸ್ತಕ ಓದಿದರೂ ವ್ಯರ್ಥವೇ.

11)ನಿಮ್ಮ ಯೋಜನೆಯಂತೆಯೇ ನೀವು, ನೀವೊಬ್ಬ ಋಷಿ ಎಂದು ಭಾವಿಸಿದರೆ ಋಷಿಯೇ ಆಗಿರುತ್ತೀರಿ.

12)ಎಲ್ಲ ಕಾರ್ಯಕ್ಷೇತ್ರಗಳಲ್ಲೂ ನೀವು ದಕ್ಷತೆಯುಳ್ಳವರಾಗಿರಬೇಕು. ಮಣಗಟ್ಟಲೆ ಸಿದ್ದಾಂತಗಳ ಗೊಂದಲದಿಂದಾಗಿ ರಾಷ್ಟ್ರಕ್ಕೆ ರಾಷ್ಟ್ರವೇ ಇಂದು ಹಾಳುಬಡಿದುಕೊಂಡಿದೆ. ನಾವು ಮಾಡುವ ಕೃತ್ಯಗಳಲ್ಲಿ ಸಂಭವಿಸಬಹುದಾದ ದೋಷ-ತಪ್ಪು ಎಂಬುವುಗಳೇ ನಮಗೆ ಪಾಠ ಕಲಿಸುವಂಥವು. ನಾಯಕನಲ್ಲಿ ಚಾರಿತ್ರ್ಯವಿಲ್ಲದಿದ್ದರೆ ಅನುಯಾಯಿಗಳಲ್ಲಿ ಸ್ವಾಮಿನಿಷ್ಠೆ ಇರುವುದಿಲ್ಲ.

“ನನಗೆ ಬೇಕು ವಿದ್ಯುತ್ತಿನ ಇಚ್ಚಾಶಕ್ತಿಗಳು ಮತ್ತು ನಡುಗುವುದನ್ನೇ ಅರಿಯದ ಗಂಡೆದೆಗಳು!”

“ನೀನು ನಿನಗಿಷ್ಟವಾದ ಯಾವ ವಸ್ತುವಿನ ಮೇಲಾದರೂ ಧ್ಯಾನ ಮಾಡಿಕೋ ನಾನು ಮಾತ್ರ ಸಿಂಹದ ಹೃದಯದ ಮೇಲೆ ಧ್ಯಾನ ಮಾಡುವವನು ಅದರಿಂದ ನನಗೆ ಶಕ್ತಿ ಬರುತ್ತದೆ””ಪರಿಶುದ್ದರೂ ನಿಸ್ವಾರ್ಥಿಗಳೂ ಆದ ಕೆಲವೇ ಕೆಲವು ಸ್ತ್ರೀಪುರುಷರನ್ನು ನನಗೆ ಒದಗಿಸಿ;ಇಡೀ ಜಗತ್ತನ್ನೇ ಅಲುಗಾಡಿಸಿ ಬಿಡುತ್ತೇನೆ ನಾನು!” ಇವು ವೀರಸನ್ಯಾಸಿ ವಿವೇಕಾನಂದರ ಧೀರ ನುಡಿಗಳು. ಇವರು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ವಜ್ಞಾನದ ಗೌರವ ಪ್ರಾದ್ಯಾಪಕರಾಗಿ ಆಯ್ಕಯಾದ ಮೊದಲ ಏಷ್ಯಾಖಂಡದ  ವ್ಯಕ್ತಿ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಆಳವಾಗಿ ಅದ್ಯಯನ ಮಾಡುವದರ ಜೊತೆಗೆ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಭಾರತದ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವೇ ಇಲ್ಲ, ರಾಷ್ಟ್ರಕವಿ ಕುವೆಂಪುರವರು ಬರೆದ”ಸ್ವಾಮಿ ವಿವೇಕಾನಂದ”ಕೃತಿಯನ್ನು ತಪ್ಪದೇ ಓದಿ, ಜೀವನಕ್ಕೆ ಅವಶ್ಯಕವಾಗಿ ಬೇಕಾಗುವ ವ್ಯಾಪಾರ, ಬೇಸಾಯ, ಮಾರಾಟ ಸಂಸ್ಕೃತಿ ಮೊದಲಾದವುಗಳ ಜೊತೆಗೆ ಮೂಡನಂಬಿಕೆಗಳನ್ನು ಅಳಿಯಿರಿ, ಭಾವೀ ಭಾರತದ ಹಿರಿಮೆ ಗರಿಮೆ ಸಾದಿಸುವುದರ ರಹಸ್ಯವಿರುವುದು ಸಂಘಟನೆಯಲ್ಲಿ, ಶಕ್ತಿ ಸಂಚಯನದಲ್ಲಿ, ಇಚ್ಛಾಶಕ್ತಿಯ ಹೊಂದಾಣಿಕೆಯಲ್ಲಿ ಜಗಳಗಳನ್ನೆಲ್ಲ ನಿಲ್ಲಿಸಬೇಕು, ವಿವೇಕವಾಣಿಯಾದ ಓ ಧೀರನೇ ನಿನ್ನೆಲ್ಲ ಶಕ್ತಿಸಾಮಥ್ರ್ಯಗಳನ್ನೂ ಒಗ್ಗೂಡಿಸಿಕೊಂಡು ಕಗ್ಗತ್ತಲೆಯಂಥ ಪರಿಸ್ಥಿತಿಗಳಲ್ಲೂ ಎದೆಗೆಡದೆ ಮುನ್ನಡೆ. ಎಂಬುದನ್ನೂ ಮರೆಯದೇ ಪಾಲಿಸುತ್ತ ಬದುಕಿದ್ದಾದರೆ ಯುವಜನಾಂಗ ಬದುಕಿನಲ್ಲಿ ಉತ್ತಮ ಮಾರ್ಗದಲ್ಲಿ ಮುನ್ನಡೆಯುವದರಲ್ಲಿ ಸಂದೇಹವಿಲ್ಲ. ಇವು ಕೆಲವು ಅವರ ನುಡಿಮುತ್ತುಗಳು. ವಿವೇಕಾನಂದರ ಜನ್ಮದಿನ ಯುವಶಕ್ತಿ ದಿನವಾಗಿ ಆಚರಿಸುವ ನಾವುಗಳು ಅವರ ಬದುಕಿನ ಆದರ್ಶ ಅಳವಡಿಸಿಕೊಳ್ಳುವುದು ಅನುಕರಣೀಯವಾದುದು.

-ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x